ಕುಂದಾಪುರ: ವಿದ್ಯಾರಣ್ಯ ಶಾಲೆಯಲ್ಲಿ ವಿದ್ಯಾರ್ಥಿನಿಗೆ 3 ಲಕ್ಷ ರೂಪಾಯಿಗಳ ಸಹಾಯಹಸ್ತ ವಿತರಣೆ

ಕುಂದಾಪುರ: ಹೃದಯ ಸಂಭಂದಿಸಿದ ಖಾಯಿಲೆಯಿಂದ ತನ್ನ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಶಾಲಾ ಆಡಳಿತ ಮಂಡಳಿ, ಪೋಷಕರು, ಶಿಕ್ಷಕ-ಶಿಕ್ಷಕೇತರ ವೃಂದ ಒಟ್ಟು ಸೇರಿ ಮೂರು ಲಕ್ಷ ರೂಪಾಯಿಗೂ ಮೀರಿ ಧನಸಹಾಯ ನೀಡಿದ ಅಪರೂಪದ ಘಟನೆ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನಲ್ಲಿ ನಡೆದಿದೆ.
ಎಲ್ಲರೂ ಒಟ್ಟು ಮಾಡಿ ನೀಡಿದ ಹಣದ ಮೊತ್ತ ರೂ. ಮೂರು ಲಕ್ಷದ ಒಂದು ಸಾವಿರದ ನಾನೂರ ಅರವತ್ತೈದು ರೂಪಾಯಿಗಳನ್ನು ಮಂಗಳವಾರ ಶಾಲಾ ಆಡಳಿತ ಮಂಡಳಿಯ ಸಂತ್ರಸ್ಥೆ ವಿದ್ಯಾರ್ಥಿನಿ ತೃಷಿಕಾಳ ತಾಯಿಗೆ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್(ರಿ) ಇದರ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಅವಿಭಕ್ತ ಕುಟುಂಬ ವ್ಯವಸ್ಥೆಯು ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯ ಭಾಗವಾಗಿದೆ. ಶಾಲೆಯೂ ಕೂಡ ಒಂದು ತುಂಬು ಕುಟುಂಬಕ್ಕೆ ಉದಾಹರಣೆಯಾಗಿದ್ದು, ಈ ವ್ಯವಸ್ಥೆಯಲ್ಲಿ ಕುಟುಂಬದ ಸದಸ್ಯರಲ್ಲಿ ನಾವು ನಮ್ಮವರು ಎಂಬ ಭಾವನೆ ಮೂಡಿ ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ, ಸಹಕಾರ ಮನೋಭಾವದಿಂದ ಜೀವನ ಸಾಗಿಸಿದಾಗ ಉತ್ತಮ ಸಮಾಜ ಮುನ್ನಡೆಗೆ ಸಹಾಯವಾಗುತ್ತದೆ. ನಮ್ಮ ಸಂಸ್ಥೆ ಈ ಸಹಕಾರ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಂದು ಹೇಳಿದರು.
ವಿದ್ಯಾರ್ಥಿನಿಯ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಸಹಕರಿಸಿದ ಶಾಲೆಯ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯ ಶಿಕ್ಷಕ ಪ್ರದೀಪ್ ಕೆ. ಮತ್ತು ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
