ಭಟ್ಕಳ: ಕಾನನದೊಳಗೊಂದು ಸಂಗೀತದೂಟ
ಇದು ಭಟ್ಕಳದ ವಿದ್ವಾನ್ ಗಜಾನನ ಹೆಬ್ಬಾರ್ ಒಳನೋಟ
ಕುಂದಾಪುರ: ಸರೆಗಮಪದನಿ ಕೇವಲ ಪದಗಳಲ್ಲ, ಸ್ವರಗಳಲ್ಲ, ಅವು ನಮ್ಮ ಮಾತುಗಳು.. ಸಂಗೀತ ಕಲಾವಿದನಿಗೆ ಈ ಮಾತುಗಳೇ ಬದುಕು, ಭವಿಷ್ಯ, ಸರ್ವಸ್ವ.. ಸಂವೇದನೆಯೊಂದಿಗಿನ ಅದ್ಭುತ ಕಲೆಯನ್ನು ಗೀರ್ವಾಣಿಯ ಕೃಪಾ ಕಟಾಕ್ಷದೊಂದಿಗೆ ತನ್ಮಯತೆಯ ಅನಾವರಣಗೊಳಿಸುವ ಸಂಗೀತ ಕಲೆಯನ್ನು ಅದ್ಭುತ ರೀತಿಯಲ್ಲಿ ಆಸ್ವಾದಿಸುವ ಸಂದರ್ಭ.



ಸುಂದರವಾದ ಕಾನನ ಕಾನನ ದೊಳಗೆ ಕೃಷಿ ಚಟುವಟಿಕೆ ಪಕ್ಕದಲ್ಲಿ ಸಾಂಪ್ರದಾಯಿಕ ಮನೆ ವಿಶಾಲವಾದ ಅಂಗಳ ಅಂಗಳದಲ್ಲಿ ಸಂಗೀತದ ಊಟ… ಇದೊಂದು ಅಪೂರ್ವ ಸಂದರ್ಭ. ತನ್ನ ಶಿಷ್ಯಂದಿರೆಲ್ಲ ಒಟ್ಟು ಸೇರಿ ಗುರು ಕಾಣಿಕೆ ನೀಡಿದ ಅಂತರಂಗ ಭಾವಯಾನ. ಸಾಕಷ್ಟು ಸಂಗೀತ ಕಲಾವಿದರನ್ನು ಬೆಳೆಸಿ ತಿದ್ದಿ ತೀಡಿದ ಭಟ್ಕಳದ ತೆರೆಮರೆಯ ವಿದ್ವಾನ್ ಗಜಾನನ ಹೆಬ್ಬಾರ್ ಅವರ ಸುಂದರ ಕಲ್ಪನೆಗೆ ಶಿಷ್ಯಂದಿರು ಮತ್ತು ಸಂಬಂಧಿಕರು ನೀಡಿದ ಸಂಗೀತದೂಟ.



ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿಯ ಕಿತ್ರೆ ಸಣ್ಣ ಊರು. ಭಟ್ಕಳದ 10 ಕಿಲೋ ಮೀಟರ್ ದೂರದಲ್ಲಿರುವ ಈ ಹಳ್ಳಿ ಸಣ್ಣದಾದರೂ ಇಲ್ಲಿರುವ ಕಲಾ ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವವರು. ಒಂಟಿ ರಸ್ತೆಯಲ್ಲಿ ಸಾಗುತ್ತಾ ಬಳಿಕ ಸುಮಾರು 300 ಮೀಟರ್ ಎಡಕ್ಕೆ ಕಾನನದೊಳಗೆ ಮಣ್ಣು ರಸ್ತೆಯಲ್ಲಿ ಸಾಗಬೇಕು. ಹೀಗೇ ಸಾಗುತ್ತಾ.. ಹೋದಾಗ ಇಳಿಜಾರಿನ ಪ್ರದೇಶದಲ್ಲಿ ಸಿಗುವ ಮಠದಕೇರಿ ರವಿ ಹೆಬ್ಬಾರ್ ಅವರ ಮನೆಯ ಪರಿಸರ ಸಂಪೂರ್ಣ ಸಂಗೀತದಿಂದ ತುಂಬಿ ಹೋಗಿತ್ತು. ಇಲ್ಲಿನ ಸಮ್ಯಕ್ ಸಂಗೀತ ಗುರುಕುಲ ವತಿಯಿಂದ ನಡೆದ ಈ ಅಂತರಂಗ-ಗಾನಯಾನ 250 ಕಲಾ ವೀಕ್ಷಕರ ಮಿತಿಯೊಳಗೆ ಬೆಳಿಗ್ಗೆಯಿಂದ ಸಂಜೆಯ ತನಕವೂ ಸಂಗೀತಾಭಿಮಾನಿಗಳನ್ನು ಹಿಡಿದಿಟ್ಟುಕೊಂಡಿತು.


ಒಟ್ಟಾರೆಯಾಗಿ ಕುಂದಾಪುರದ ಸಾಧನ ಕಲಾ ಸಂಗಮ(ರಿ.), ಗುಣವಂತೆಯ ಸ್ವರ ಸಂಸ್ಕಾರ ಹಾಗೂ ಮಠದಕೇರಿ ಮಂಜುನಾಥ ಹೆಬ್ಬಾರ್ ಕುಟುಂಬದ ಸಹಕಾರದೊಂದಿಗೆ ನಡೆದ ಅಂತರಂಗ ಗಾನ ಎಂಬ ಅದ್ಭುತ ಪ್ರಯತ್ನ ಹೀಗೆಯೇ ಮುಂದುವರೆಯಲಿ ಎಂಬುದೇ ವಾಸ್ತವ.ಕಾಮ್ ಹಾರೈಕೆ.