ರಾಹುಲ್ ನಿಜವಾಗಿಯೂ ಭಾರತದಲ್ಲೇ ಹುಟ್ಟಿದ್ದಾರೆಯೇ? ಶಂಕರ ಅಂಕದಕಟ್ಟೆ ಪ್ರಶ್ನೆ
ರಾಹುಲ್ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಕುಂದಾಪುರ : ಕಾಂಗ್ರೆಸ್ ಹಾಗೂ ಕಾಂಗ್ರೆಸ್ನ ನಾಯಕರು ದೇಶದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವಮೋರ್ವಾ ಉಡುಪಿ ಜಿಲ್ಲೆ ಹಾಗೂ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ಇದರ ನೇತೃತ್ವದಲ್ಲಿ ಶಾಸ್ತ್ರಿ ಸರ್ಕಲ್ ಬಳಿ ನಡೆದ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕುಂದಾಪುರ ಬಿಜೆಪಿ ಘಟಕದ ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ ಅವರು, ರಾಹುಲ್ ಗಾಂಧಿ ತಮ್ಮ ಹಳೆಯ ಛಾಳಿಯನ್ನು ಮು೦ದುವರಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ಭಾರತದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡುತ್ತಾರೆ. ರಾಹುಲ್ ಗಾಂಧಿಗೆ ಮತಿಭ್ರಮಣೆಯಾಗಿದೆ, ಹಾಗಾಗಿ ದೇಶದ ವಿರುದ್ಧ ಅವರು ಪದೆ ಪದೆ ಹೇಳಿಕೆ ನೀಡುತ್ತಾರೆ. ಅವರು ದೇಶದ ವಿರುದ್ಧ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ, ರಾಹುಲ್ ಗಾಂಧಿ ಭಾರತದಲ್ಲೇ ಹುಟ್ಟಿದ್ದಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ದೇಶದ ವಿರುದ್ಧ ಹೇಳಿಕೆ ಮಾಡುವುದನ್ನು ಮುಂದುವಿರಿಸಿದರೇ ಗಲ್ಲಿಗಲ್ಲಿಗಳಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ದ ಪ್ರತಿಭಟನೆ ಮಾಡುವುದು ನಿಶ್ಚಿತ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಕುಂದಾಪುರ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಬೀಜಾಡಿ ಮಾತನಾಡಿ, ರಾಹುಲ್ ಗಾಂಧಿ ಅಜ್ಜನ ಕಾಲದಿಂದಲೂ ಕಾಂಗ್ರೆಸ್ ದೇಶದ ವಿರುದ್ದ ಹೇಳಿಕೆಯನ್ನು ನೀಡುತ್ತಲೇ ಬಂದಿದೆ. ಕಾಂಗ್ರೆಸ್ ಭಾರತದ ವಿರುದ್ಧ ಹೋರಾಡಲಿದೆ ಎಂಬ ಹೇಳಿಕೆಯನ್ನು ರಾಹುಲ್ ಗಾಂಧಿ ವಾಪಾಸ್ ಪಡೆಯಲಿ ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಲಿ, ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಯುವಮೋರ್ಚಾದ ಕಾರ್ಯದರ್ಶಿ ಸೇರಿ ಪದಾಧಿಕಾರಿಗಳು, ಬಿಜೆಪಿ ಕುಂದಾಪುರ ಘಟಕದ ಪದಾಧಿಕಾರಿಗಳು ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಸೊರೋಸ್ ಏಜೆಂಟ್ ರಾಹುಲ್ ಗಾಂಧಿಗೆ ಧಿಕ್ಕಾರ, ದೇಶ ವಿರೋಧಿ ರಾಹುಲ್ ಗಾಂಧಿಗೆ ಧಿಕ್ಕಾರ ಎಂದು ಬರೆದಿದ್ದ ಫಲಕಗಳನ್ನು ಹಿಡಿದು ರಾಹುಲ್ ಗಾಂಧಿ ಹಾಗೂ ಕಾ೦ಗ್ರೆಸ್ ವಿರುದ್ಧ ಘೋಷಣೆ ಕೂಗಿದರು