ಕುಂದಾಪುರ: ಸಂವಿಧಾನ ಸ್ವೀಕರಿಸಿ 75 ವರ್ಷವಾದರೂ ಮೂಲ ನಿವಾಸಿಗಳ ಸ್ಥಿತಿ ಶೋಚನೀಯ – ರಾಜು ಬೆಟ್ಟಿನ ಮನೆ

ಕುಂದಾಪುರ: ನಮ್ಮ ದೇಶವು ಸಂವಿಧಾನ ಅಂಗೀಕರಿಸಿ75 ವರ್ಷ ಸಂದರು ಈ ದೇಶದ ಮೂಲ ನಿವಾಸಿಗಳ ಬದಕು ಇನ್ನೂ ಶೋಚನೀಯ ಸ್ಥಿತಿಯಲ್ಲೆ ಇದೆ. ನಮ್ಮ ಜನಾಂಗ ಇನ್ನೂ ಕೂಡಾ ಭೂಮಿ ಹಕ್ಕಿನಿಂದ ಮೂಲಭೂತ ಸೌಕರ್ಯಗಳಿಂದ ವಂಚಿತಾರಾಗಿಯೇ ಬದುಕು ಸಾಗಿಸುವ ವ್ಯವಸ್ಥೆ ಪ್ರಜಾಪ್ರಭುತಕ್ಕೆ ನಾಚಿಕೆಗೇಡು ಎಂದು ಕುಂದಾಪುರ ತಾಲೂಕು ಸಮಿತಿಯ ಪ್ರಧಾನ ಸಂಚಾಲಕ ಕೆ ಸಿ ರಾಜು ಬೆಟ್ಟಿನಮನೆ ಹೇಳಿದ್ದಾರೆ.
ಅವರು ಸೋಮವಾರ ಮೊಳಹಳ್ಳಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆದ ಪರಿಶಿಷ್ಟ ಜಾತಿ ಪಂಗಡಗಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಸಮುದಾಯದ ಜನರಿಗೆ ಸಮಪರ್ಕವಾಗಿ ದೊರಕಿಸಿ ಕೊಡುವಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ಇದೇ ಸಂದರ್ಭ ಮಾಹಿತಿ ನೀಡದೆ ಸಭೆಯಿಂದ ಹೊರಹೋದ ಗ್ರಾಮ ಸಾಹಾಯಕರ ವರ್ತನೆಯನ್ನು ನಮ್ಮ ಸಂಘಟನೆ ಖಂಡಿಸಲಾಯಿತು. ದಲಿತರ ಮನೆಯ ಸಮೀಪದಲ್ಲಿ ದಲಿತೇತರ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಹಲವಾರು ವರ್ಷಗಳಿಂದ ಅಕ್ರಮ ಸಾರಾಯಿ ಮಾರುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಮೋಹನ್ ಚಂದ್ರ ಕಾಳಾವರ್ಕರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ( ರಿ) ಅಂಬೇಡ್ಕರ್ ವಾದ ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಘಟನಾ ಸಂಚಾಲಕ ಅಶೋಕ ಮೊಳಹಳ್ಳಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಅದ್ಯಕ್ಷ ಚಂದ್ರಶೇಖರ ಶೆಟ್ಟಿ ಸಭಾದ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾವನಾ ಸಭೆಯನ್ನು ನಡೆಸಿಕೊಟ್ಟರು. ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು ಮೊಳಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಪಂಗಡಗಳ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಬೇಡಿಕೆಗಳ ಮನವಿಯನ್ನು ಸ್ಥಳೀಯಾಡಳಿತಕ್ಕೆ ನೀಡಿದರು.