ಅಂಪಾರು: ಸೊಸೈಟಿ ಚುನಾವಣೆಯಲ್ಲಿ ಕಿಂಗ್ ಮೇಕರ್ ಆದ ಸ್ವಾಭಿಮಾನಿ ಬಳಗ – ಬಿಜೆಪಿ ಕೈ ತಪ್ಪಿದ ಆಡಳಿತ


ಕುಂದಾಪುರ: ಭಾನುವಾರ ನಡೆದ ಆಂಪಾರು ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸ್ವಾಭಿಮಾನ ಸಮಿತಿಯ ಸದಸ್ಯರು ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿದರೆ, ಈ ಹಿಂದೆ ಆಡಳಿತ ನಡೆಸುತ್ತಿದ್ದ ಬಿಜೆಪಿ ಕೇವಲ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.



ಸೊಸೈಟಿಯಲ್ಲಿ ಈ ಹಿಂದೆ ಅವ್ಯವಹಾರದ ಆರೋಪಗಳು ಕೇಳಿಬಂದಿದ್ದು, ಇದಕ್ಕಾಗಿ ಸ್ಥಳೀಯ ಸ್ವಾಭಿಮಾನಿ ಬಳಗ ಮೂಲಕ ಬೃಹತ್ ಪ್ರತಿಭಟನೆ ಪತ್ರಿಕಾಗೋಷ್ಠಿ ಆಕ್ರೋಶಗಳು ಕಾನೂನು ಹೋರಾಟಗಳು ನಡೆದಿದ್ದವು. ಇದೆಲ್ಲದರ ಪರಿಣಾಮ ಭಾನುವಾರ ನಡೆದ ಚುನಾವಣೆಯ ಮೇಲೆ ಬಿದ್ದಿದ್ದು ಕಾಂಗ್ರೆಸ್ ಬೆಂಬಲಿತ ಆರು ಸದಸ್ಯರು, ಸ್ವಾಭಿಮಾನ ಬಳಗದ ನಾಲ್ಕು ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ ಮೂವರು ಸದಸ್ಯರು ನೂತನ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.





ಈ ಹಿಂದೆ ನಡೆದಿರುವ ಅವ್ಯವಹಾರಗಳನ್ನು ಬಯಲಿಗೆಳೆಯಲಾಗಿದೆ. ಅದರ ತನಿಖೆ ಮುಂದುವರೆಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಕಾಂಗ್ರೆಸ್ ಹಾಗೂ ಸ್ವಾಭಿಮಾನಿ ಬಳಗದ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಸಂಘದ ಸದಸ್ಯರು ಈ ಬಗ್ಗೆ ಯಾವುದೇ ಅನುಮಾನಪಡಬೇಕಿಲ್ಲ ಎಂದೂ ಹೇಳಿದ್ದಾರೆ.




ಒಟ್ಟು 13 ನಿರ್ದೇಶಕ ಸ್ಥಾನ ಹೊಂದಿರುವ ಅಂಪಾರು ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಈ ಹಿಂದೆ ಬಿಜೆಪಿ ಆಡಳಿತ ನಡೆಸಿತ್ತು. ಈ ಸಂದರ್ಭ ಸುಮಾರು ಮೂರೂವರೆ ಕೋಟಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಮತ್ತು ಚುನಾವಣೆಯ ಸಂದರ್ಭ ಸಹಕಾರಿ ಸಂಘದ ಮತದಾರರಿಗೆ ಕಾಂಗ್ರೆಸ್ ಬೆಂಬಲಿತ ಮತ್ತು ಸ್ವಾಭಿಮಾನಿ ಬಳಗ ಮೈತ್ರಿಯಾಗಿ ಇದೇ ಅವ್ಯವಹಾರ ಆರೋಪವನ್ನು ಮತದಾರರ ಮುಂದಿಟ್ಟಿತ್ತು. ಇದರಿಂದಾಗಿ ಇಲ್ಲಿಯ ಚುನಾವಣೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿತ್ತು.



ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪ್ರದೀಪ್ ಕುಮಾರ್ ಶೆಟ್ಟಿ, ಮನೋಹರ್ ಶೆಟ್ಟಿ, ಕಿರಣ್ ಹೆಗ್ಡೆ, ಮಂಜುನಾಥ್ ನಾಯಕ್, ಜಯರಾಮ್ ಶೆಟ್ಟಿ, ಅಜಿತ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಸ್ವಾಭಿಮಾನಿ ಬಳಗದ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್, ಸುನಿಲ್, ಜ್ಯೋತಿ ಹಾಗೂ ಉಮೇಶ್ ಕೊಠಾರಿ ಜಯಶಾಲಿಗಳಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಅರುಣ್ ಕುಮಾರ್ ಶೆಟ್ಟಿ, ಮೋಹನ್ ವೈದ್ಯ, ಭಾರತಿ ಶೇಟ್ ಗೆಲುವಿನ ನಗೆ ಬೀರಿದ್ದಾರೆ.