ಕುಂದಾಪುರ: ಈ ವಾಹನಗಳ ಹಿಂದಿನಿಂದ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ – ಕಣ್ಮುಚ್ಚಿ ಕುಳಿತ ಇಲಾಖೆಗಳು!

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆಯೇ ಎನ್ನುವ ಜಿಜ್ಞಾಸೆ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಅಪರಾಧ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಂಚಾರಿ ಸುವ್ಯವಸ್ಥೆ ಹದಗೆಡುತ್ತಿದೆ. ಅಕ್ರಮ ಮಣ್ಣು ಸಾಗಾಟ ಒಂದು ಕಡೆಯಾದರೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಹಿಂದಿನಿಂದ ಬರುವ ವಾಹನಗಳು, ಬೈಕು ಸವಾರರು ಅಪಾಯದ ರೀತಿಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಹೌದು, ಕುಂದಾಪುರ ತಾಲೂಕಿನ ಜನನಿಬಿಡ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳು ಹಾಗೂ ಸರ್ವಿಸ್ ರಸ್ತೆಗಳಲ್ಲಿ ಎರ್ರಾಬಿರಿಯಾಗಿ ಮಣ್ಣು ತುಂಬಿಸಿಕೊಂಡು ಹೋಗುವ ಟಿಪ್ಪರ್ ಗಳು ಸಂಚರಿಸುತ್ತಿದ್ದರೆ, ಯಾವುದೇ ರೀತಿಯ ಭದ್ರತೆ ಇಲ್ಲದೆ ತೆರೆದ ವಾಹನಗಳಲ್ಲಿ ಮಣ್ಣು ಸಾಗಾಟದಿಂದಾಗಿ ಹಿಂದುಗಡೆಯಿಂದ ಬರುವ ವಾಹನ ಸವಾರರಿಗೆ ಅಪಾಯ ತಂದಿಡುತ್ತಿದೆ.

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರಾಗಲಿ, ಗಣಿಗಾರಿಕೆಯ ಇಲಾಖೆಗಳಾಗಲಿ ಅಥವಾ ಆರ್ಟಿಓಗಳಾಗಲಿ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದಿರುವುದು ಅಕ್ರಮ ದಂಧೆಕೋರರಿಗೆ ವರದಾನವಾಗಿ ಪರಿಣಮಿಸಿದೆ. ಆದರೆ ದ್ವಿಚಕ್ರ ವಾಹನ ಸವಾರರಿಗೆ ಕತ್ತಿಯ ಮೇಲಿನ ಅಲುಗಿನ ಸಂಚಾರ ಅನಿವಾರ್ಯವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವರೇ ಕಾದುನೋಡಬೇಕಿದೆ.