ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ : ಅಧ್ಯಕ್ಷರಾಗಿ ಷಡಕ್ಷರಿ ಖಜಾಂಚಿಯಾಗಿ ಶಿವರುದ್ರಯ್ಯ ಆಯ್ಕೆ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗು ಖಜಾಂಚಿ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಿರಿಯ ಲೆಕ್ಕ ಪರಿಶೋಧನಾಧಿಕಾರಿ ಸಿ.ಎಸ್.ಷಡಕ್ಷರಿ ಆಯ್ಕೆಯಾದರೆ ಖಜಾಂಚಿಯಾಗಿ ಭೂಮಾಪನ ಇಲಾಖೆಯ ಅಧೀಕ್ಷಕ ಶಿವರುದ್ರಯ್ಯ ವಿ.ವಿ. ಆಯ್ಕೆಯಾಗಿದ್ದಾರೆ.

ಸಿ.ಎಸ್.ಷಡಕ್ಷರಿ ಅವರು 507 ಮತಗಳನ್ನು ಪಡೆದುಕೊಂಡಿದ್ದು, ಅವರ ಪ್ರತಿಸ್ಪರ್ಧಿ ಬಿ. ಪಿ. ಕೃಷ್ಣೇಗೌಡ 442 ಮತಗಳನ್ನು ಪಡೆದುಕೊಂಡರು. 65 ಮತಗಳ ಅಂತರದಲ್ಲಿ ಷಡಕ್ಷರಿ ಗೆಲುವು ಸಾಧಿಸಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

ಇನ್ನು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವರುದ್ರಯ್ಯ 485 ಮತಗಳನ್ನು ಪಡೆದುಕೊಂಡರೆ ಪ್ರತಿಸ್ಪರ್ಧಿ ನಾಗರಾಜ್ ಆರ್. ಜುಮ್ಮಣ್ಣವರ ಅವರು 467 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಶಿವರುದ್ರಯ್ಯ 18 ಮತಗಳ ಅಂತರದಲ್ಲಿ ವಿಜಯಮಾಲೆ ಧರಿಸಿದ್ದಾರೆ.
ಇಬ್ಬರೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.