ಕುಂದಾಪುರ: ಕಲ್ಲು ಗಣಿಗಾರಿಕೆ ಶೀಘ್ರ ಆರಂಭ – ಮಾಜಿ ಶಾಸಕ ಗೋಪಾಲ ಪೂಜಾರಿ
ಕುಂದಾಪುರ : ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಕೆಂಪು ಕಲ್ಲು ಗಣಿಗಾರಿಕೆ ಶೀಘ್ರ ಆರಂಭಗೊಳ್ಳಲಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ. ಈ ಬಗ್ಗೆ ಗಣಿ, ಕನಿಜ ಇಲಾಖೆಯ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಜಯಪ್ರಕಾಶ್ ಹೆಗ್ಡೆ ಹಾಗೂ ತಾವು ಭೇಟಿ ಮಾಡಿ ಮನವಿ ಮಾಡಿದ್ದು ಶುಕ್ರವಾರ ರಾತ್ರಿ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಪ್ರಸ್ತಾಪವಿಸಿ ಎನ್ಐಟಿಕೆ ವರದಿಯ ಆಧಾರದಲ್ಲಿ ಅನುಮತಿಸುವುದಕ್ಕೆ ತೀರ್ಮಾನ ಮಾಡಲಾಗಿದೆ. ಇದೀಗ ಮುಖ್ಯಮಂತ್ರಿಗಳ ಅಂಕಿತ ಮಾತ್ರ ಬಾಕಿ ಇದ್ದು, ಸಹಿ ಬಿದ್ದ ತಕ್ಷಣ ಗಣಿಗಾರಿಕೆ ಆರಂಭಗೊಳ್ಳಲಿದೆ ಎಂದರು.

ಕುಂದಾಪುರದ ಐ ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮರಳುಗಾರಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಳ ಒಪ್ಪಂದದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಎಲ್ಲವೂ ಸ್ಥಗಿತಗೊಂಡಿವೆ. ಈ ಸಂಬಂಧ ಎಲ್ಲಾ ತಿದ್ದುಪಡಿಗಳಿಗೆ ಡಿಸಿ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಕಾನೂನು ಇಲಾಖೆಯ ಸಚಿವರು, ಹಾಗೂ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕೂಡ ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ಮುಖ್ಯಮಂತ್ರಿಗಳ ಸಹಿ ಆದ ಬಳಿಕ ಪುನರಾರಂಭಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಕೊನೇ ಕ್ಷಣದಲ್ಲಿ 3ಎಬಿ ಯನ್ನು ರದ್ದು ಮಾಡಿದ್ದೇ ಈ ಸಮಸ್ಯೆಗೆ ಕಾರಣ. ಆದರೆ ಅದನ್ನು ಮರೆಮಾಚಿ ಬಿಜೆಪಿ ರಾಜಕೀಯ ಲಾಭಕ್ಕೋಸ್ಕರ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಇದನ್ನು ಜನ ಅರ್ಥ ಮಾಡಿಕೊಳ್ತಾರೆ ಎಂದರು. ಕಾಲ್ತೋಡು ವಿಜಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.