ಗಂಗೊಳ್ಳಿ: 25 ವರ್ಷಗಳ ಬಳಿಕ ಗಂಗೊಳ್ಳಿ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ!


ಕುಂದಾಪುರ: ಡಿಸೆಂಬರ್ 10 ರಂದು ನಡೆದ ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಎರಡು ದಿನಗಳ ಬಳಿಕ ಗುರುವಾರ ಹೊರಬಿದ್ದಿದೆ. ಗುರುವಾರ ಬೆಳಗ್ಗಿನಿಂದಲೇ ಕುಂದಾಪುರದ ತಾಲೂಕು ಕಚೇರಿ ಮಿನಿ ವಿಧಾನಸೌಧದಲ್ಲಿ ನಡೆದ ಮತ ಎಣಿಕೆ ಕಾರ್ಯ ರಾತ್ರಿ 10 ಗಂಟೆ ಸುಮಾರಿಗೆ ಅಂತ್ಯಗೊಂಡಿದೆ.

ಕಳೆದ 25 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಂದುತ್ವದ ಫ್ಯಾಕ್ಟರಿ ಎಂದೇ ಬಿಂಬಿತವಾಗಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪರವಾಗಿ ಹೊರಬಿದ್ದಿದೆ. ಆ ಮೂಲಕ 25 ವರ್ಷಗಳ ಬಳಿಕ ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ.

ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 33 ಸ್ಥಾನಗಳ ಪೈಕಿ 19 ಸ್ಥಾನಗಳನ್ನು ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. 12 ಸ್ಥಾನಗಳನ್ನು ಬಿಜೆಪಿ ತನ್ನ ವಶಕ್ಕೆ ಪಡೆದುಕೊಂಡಿದೆ. 2 ಸ್ಥಾನಗಳನ್ನು ಪಕ್ಷೇತರ ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಆ ಮೂಲಕ ಗ್ರಾಮ ಪಂಚಾಯತ್ ಆಡಳಿತ ನಡೆಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 17ನ್ನು ದಾಟಿ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಅಧಿಕಾರ ಗೆದ್ದುಕೊಂಡಂತಾಗಿದೆ.

1ನೇ ವಾರ್ಡಿನ ಒಟ್ಟು ಐದು ಸ್ಥಾನಗಳಲ್ಲಿ ಗುರುರಾಜ, ರೇಖಾ ಖಾರ್ವಿ ಸರೋಜಕೃಷ್ಣ ಪೂಜಾರಿ, ನಾಗರಾಜ ಖಾರ್ವಿ, ನಾಗರತ್ನ ಶೇರುಗಾರ್ ಗೆಲುವು ಸಾಧಿಸಿದ್ದಾರೆ. 2ನೇ ವಾರ್ಡಿನಲ್ಲಿ ತಬ್ರರೈಸ್, ಶರೀನಾ, ಅಬೂಬಕ್ಕರ್ ನಾಕುದಾ ಹಾಗೂ ರಜಬ್ ಗೆಲುವು ಸಾಧಿಸಿದ್ದಾರೆ. 3ನೇ ವಾರ್ಡಿನಲ್ಲಿ ದೀಪಾ, ಗೋಪಾಲ್ ಖಾರ್ವಿ, ಮಮತಾ ಎಸ್ ಗಾಣಿಗ, ಶ್ಯಾಮಲ ಶೆಡ್ತಿ ಗೆಲುವು ಸಾಧಿಸಿದರೆ 4ನೇ ವಾರ್ಡಿನಲ್ಲಿ ಮಹೇಶ್, ಅಮ್ಮು ಮೊಗೇರ್ತಿ, ಶೋಭ ಕೃಷ್ಣ ಬಿಲ್ಲವ, ದೇವೇಂದ್ರ ಖಾರ್ವಿ ಗೆಲುವು ಸಾಧಿಸಿದ್ದಾರೆ.

5ನೇ ವಾರ್ಡಿನಲ್ಲಿ ಲಕ್ಷ್ಮಿ ಪೂಜಾರಿ, ಜನ್ನಿ ಖಾರ್ವಿ, ಗಣೇಶ್ ಪೂಜಾರಿ, ಜಯೇಂದ್ರ ಖಾರ್ವಿ ಗೆದ್ದು ಬೀಗಿದರೆ, 6ನೇ ವಾರ್ಡಿನಲ್ಲಿ ಮಂಜುಳಾ ದೇವಾಡಿಗ, ಮ್ಯಾಕ್ಸಿಮ್ ಆಲ್ಬರ್ಟ್, ಫೆರ್ನಾಂಡಿಸ್, ಮೊಮಿನ್ ಸಮೀರ್ ಅಹ್ಮದ್ ಗೆಲುವು ಸಾಧಿಸಿದ್ದಾರೆ. 7ನೇ ವಾರ್ಡಿನಲ್ಲಿ ಸುರೇಖಾ ಕಾನೋಜಿ, ಶ್ರೀನಾಥ್ ಖಾರ್ವಿ, ರಿಯಾಜ್ ಅಹ್ಮದ್ ಹಾಗೂ 8ನೇ ವಾರ್ಡಿನಲ್ಲಿ ಚಂದ್ರ ಖಾರ್ವಿ, ಅಕ್ಕಮ್ಮ ಯು ಕುಮಾರ್, ಅಶ್ವಿನಿ ಖಾರ್ವಿ, ರಾಜೇಂದ್ರ ಗೆಲುವು ಸಾಧಿಸಿದ್ದಾರೆ.

ಒಟ್ಟು 8 ವಾರ್ಡುಗಳ 33 ಸ್ಥಾನಗಳಿಗೂ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಜೊತೆಯಾಗಿ ಸ್ಪರ್ಧಿಸಿದರೆ ಬಿಜೆಪಿ ಏಕಾಂಗಿಯಾಗಿ ಹೋರಾಟಕ್ಕಿಳಿದಿತ್ತು. ಭಾರತೀಯ ಜನತಾ ಪಕ್ಷದ ನಾಯಕರ ನಿರ್ಲಕ್ಷ, ಪಕ್ಷ ಮತ್ತು ಹಿಂದೂ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯ ಈ ಬಾರಿಯ ಗಂಗೊಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯ ಮೇಲೆ ನೇರ ಪರಿಣಾಮ ಬೀರಿರುವುದು ಚುನಾವಣಾ ಫಲಿತಾಂಶದ ಬಳಿಕ ಬಹಿರಂಗಗೊಂಡಂತಾಗಿದೆ. ಅಲ್ಲದೆ ಕಾಂಗ್ರೆಸ್ ಸೋಲಿಗೆ ಕಾರಣವಾಗುತ್ತಿದ್ದ ಎಸ್ಡಿಪಿಐ ಈ ಬಾರಿ ಕಾಂಗ್ರೆಸ್ ಜೊತೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಅಧಿಕಾರದ ಗದ್ದುಗೆ ನೀಡಲು ಸಹಕರಿಸಿದೆ. ಇದೀಗ ಕಾಂಗ್ರೇಸ್ ಅಧ್ಯಕ್ಷ ಸ್ಥಾನ ಹಿಡಿದರೆ ಎಸ್.ಡಿ.ಪಿ.ಐ ಉಪಾಧ್ಯಕ್ಷ ಸ್ಥಾನ ಪಡೆಯಲಿದೆ. ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲಿದೆ.