ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ- 36 ನೇ ವಾರ್ಷಿಕೋತ್ಸವ ಸಂಪನ್ನ
ಕುಂದಾಪುರ: ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ ಇಲ್ಲಿಯ 36ನೇ ವಾರ್ಷಿಕೋತ್ಸವವು ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ಕೆ. ರಾಧಾಕಷ್ಣ ಶೆಣೈ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಛಲ ಮತ್ತು ಗುರಿಯಿಂದ ಮುನ್ನಡೆದು ಯಶಸ್ಸು ಸಾಧಿಸುವ ಬಗ್ಗೆ ತಿಳಿಸಿ, ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಧತ್ತಿ ನಿಧಿ ಬಹುಮಾನಗಳನ್ನು ವಿತರಿಸಿದರು.

ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ಸಂಜೀತ್ ಪ್ರಕಾಶ್ ರಾವ್ ಮಾತನಾಡಿ, ಪೋಷಕರು ತಮ್ಮ ಮಕ್ಕಳೊಂದಿಗೆ ದಿನದ ಸ್ವಲ್ಪ ಸಮಯವನ್ನಾದರೂ ಮೀಸಲಿಟ್ಟು ಅವರ ಗುರಿ ಸಾಧನೆಗೆ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು. ಇವರೂ ಕೂಡ ಅಧಿಕ ಅಂಕ ಗಳಿಸಿದವರಿಗೆ ದತ್ತಿ ನಿಧಿ ಬಹುಮಾನಗಳನ್ನು ವಿತರಿಸಿದರು.
ಆಡಳಿತ ಮಂಡಳಿಯ ಖಜಾಂಚಿ ಕೆ. ಲಕ್ಷ್ಮೀ ನಾರಾಯಣ ಶೆಣೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಗಾಣಿಗ, ಪೂರ್ವ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯಸ್ಥೆ ರೇಷ್ಮಾ ಡಿಸೋಜಾ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೃಷ್ಣ ಅಡಿಗ ವಾರ್ಷಿಕ ವರದಿ ವಾಚಿಸಿದರು. ಶಾಲಾ ವಿದ್ಯಾರ್ಥಿ ಮುಖಂಡ ವಿಘ್ನೇಶ್ ಶಾಲಾ ಮಂತ್ರಿ ಮಂಡಲದ ವರದಿ ವಾಚಿಸಿದರು. ವಿದ್ಯಾರ್ಥಿನಿ ಕುಮಾರಿ ಆಕಾಂಕ್ಷ ಎಸ್. ಪೈ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶರ್ವಾಣಿ ಹಾಗೂ ಮಹಮದ್ ಹಿಬಾನ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕುಮಾರಿ ಸಮೃದ್ಧಿ ನಾಯಕ್ ವಂದಿಸಿದರು. ಬಳಿಕ ನಡೆದ ನೃತ್ಯ, ನಾಟಕ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.