ಕುಂದಾಪುರ: ತೇನ್ ಸಿಂಗ್ ಸಾಧನೆ, ಆತನ ತಾಯಿ ಸ್ಪೂರ್ತಿ ನಮಗೆ ಮಾದರಿಯಾಗಬೇಕು – ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ ಗಾಂಧಿ ಮೈದಾನದಲ್ಲಿ ಸುಜ್ಞಾನ್ ಪಿಯು ಕಾಲೇಜು, ವಿದ್ಯಾರಣ್ಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ) ಯಡಾಡಿ ಮತ್ಯಾಡಿ ಇದರ ವಾರ್ಷಿಕ ಕ್ರೀಡಾಕೂಟ 2024

ಕುಂದಾಪುರ : ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವುದೇ ನಿಜವಾದ ಕ್ರೀಡಾಳುಗಳ ಲಕ್ಷಣ. ಗೆದ್ದವರು ಹಿಗ್ಗುವುದು, ಸೋತವರು ಕುಗ್ಗುವುದು ಎರಡೂ ನಡೆಯದೇ ಭಾಗವಹಿಸುವಿಕೆಯನ್ನು ಸ್ಪೂರ್ತಿಯಾಗಿ ಅನುಭವಿಸಿದಾಗ ಕ್ರೀಡೆಗಳು ಯಶಸ್ಸು ಕಾಣುತ್ತವೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಸುಜ್ಞಾನ್ ಪಿಯು ಕಾಲೇಜು, ವಿದ್ಯಾರಣ್ಯ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ) ಯಡಾಡಿಮತ್ಯಾಡಿ ಇದರ ವಾರ್ಷಿಕ ಕ್ರೀಡಾಕೂಟ 2024 ಉದ್ಘಾಟಿಸಿ ಮಾತನಾಡಿದರು.

ತೇನ್ ಸಿಂಗ್ ನ ಸಾಧನೆ, ಆತನ ತಾಯಿ ನೀಡಿದ ಸ್ಪೂರ್ತಿ ಎರಡೂ ನಮಗೆ ಮಾದರಿಯಾಗಬೇಕು. ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕು ಎಂದ ಅವರು, ಸುಜ್ಞಾನ ಪಿಯು ಕಾಲೇಜು ಇವತ್ತು ರಮೇಶ ಶೆಟ್ಟಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 800 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಇದಕ್ಕೆ ಸಾಕ್ಷಿ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.
ಸ್ಪಷ್ಟ ಗುರಿಯೊಂದಿಗೆ ಛಲವಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಮಿಂಚಬಹುದು. ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಸೋಲನ್ನು ಸವಾಲಾಗಿ ಸ್ವೀಕರಿಸುವ ಗುಣಗಳು ಸಾಧಕನಿಗೆ ಮುಖ್ಯ. ಸರ್ಕಾರಗಳು ಕ್ರೀಡಾಕ್ಷೇತ್ರಕ್ಕೆ ಮೀಸಲಾತಿಯನ್ನು ನೀಡಿರುವುದರಿಂದ ಉದ್ಯೋಗಾವಕಾಶಕ್ಕೂ ಕ್ರೀಡೆ ಬಹುಮುಖ್ಯ ಎನ್ನುವುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಅರ್ಥಮಾಡಿಕೊಳ್ಳಬೇಕಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಗುರುರಾಜ್ ಪೂಜಾರಿ ಹೇಳಿದರು.
ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್ನ ಚೇರ್ಮನ್ ಡಾ.ರಮೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವಜನಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕುಸುಮಾಕರ ಶೆಟ್ಟಿ ಉಪಸ್ಥಿತರಿದ್ದರು. ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಸುಜ್ಞಾನ್ ಪಿಯು ಕಾಲೇಜು ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಾಣಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮುಖ್ಯ ಶಿಕ್ಷಕ ಪ್ರದೀಪ್ ಕೆ ಉಪಸ್ಥಿತರಿದ್ದರು. ಸುಜ್ಞಾನ್ ಎಜ್ಯುಕೇಶನ್ ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಜಯಲತಾ ಶೆಟ್ಟಿ ವಂದಿಸಿದರು. ವಿಜಯಕುಮಾರ್ ಶೆಟ್ಟಿ ನಿರೂಪಿಸಿದರು.