ಕುಂದಾಪುರ: ಕಳೆದುಹೋದ ಪರ್ಸ್ ಪತ್ತೆ ಹಚ್ಚಿದ ಪೊಲೀಸರು
ಕುಂದಾಪುರ: ಮದುವೆಗೆಂದು ಬಂದಿದ್ದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗನ್ನು ಕುಂದಾಪುರ ಪೊಲೀಸರು ತಮ್ಮ ಕಾರ್ಯಕ್ಷಮತೆಯಿಂದ ಪತ್ತೆ ಹಚ್ಚಿ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಸೋಮವಾರ ಬೆಳಿಗ್ಗೆ ನಾಲ್ಕು ಜನ ಮಹಿಳೆಯರು ಮಂಗಳೂರಿನಿಂದ ಕುಂದಾಪುರ ಆರ್ ಎನ್ ಶೆಟ್ಟಿ ಹಾಲಿನಲ್ಲಿ ನಡೆಯುವ ವಿವಾಹ ಕಾರ್ಯಕ್ರಮಕ್ಕಾಗಿ ಬಂದಿದ್ದರು. ಈ ಸಂದರ್ಭ ಕುಂದಾಪುರ ಸಂಗಂ ಬಳಿ ರಿಕ್ಷವೊಂದನ್ನು ಹತ್ತಿ ಆರ್ ಎನ್ ಶೆಟ್ಟಿ ಹಾಲಿಗೆ ತೆರಳುವ ಸಮಯ ಬ್ಯಾಗ್ ಮರೆತು ಹೋಗಿದ್ದರು. ಬ್ಯಾಗಿನಲ್ಲಿ ಚಿನ್ನಾಭರಣ ಹಾಗೂ ಮೊಬೈಲ್ ಇದ್ದಿದ್ದು ಠಾಣೆಗೆ ದೂರು ನೀಡಿದ ಕೂಡಲೇ ಕಾರ್ಯ ಪ್ರವೃತ್ತರಾದ ಕುಂದಾಪುರ ವೃತ್ತ ನಿರೀಕ್ಷಕ ಎನ್ ನಂಜಪ್ಪ. ಎಎಸ್ಐ ಆನಂದ ಬೈಂದೂರು, ಚಾಲಕ ಮಾಧವರವರು ರಿಕ್ಷವನ್ನು ಪತ್ತೆ ಹಚ್ಚಿ ರಿಕ್ಷಾದೊಳಗಿರಿಸಿದ್ದ ಬ್ಯಾಗನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಿದ್ದಾರೆ. ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದನ್ನು ಆಟೋ ಚಾಲಕ ನೋಡಿರಲಿಲ್ಲ. ಹಾಗಾಗಿ ಬೇರೆ ಬಾಡಿಗೆದಾರರು ಬಂದಿದ್ದರೆ ಬ್ಯಾಗ್ ಕೈತಪ್ಪಿ ಹೋಗುವ ಸಾಧ್ಯತೆ ಇತ್ತು. ಪೊಲೀಸರ ಶೀಘ್ರ ಸ್ಪಂದನೆಗೆ ಶ್ಲಾಘನೆ ವ್ಯಕ್ತವಾಗಿದೆ.