ಕುಂದಾಪುರ: ಬಾಲಕಿಯರ ಹಾಸ್ಟೆಲ್ ನಿಂದ ಅಕ್ರಮ ಚೀಲ ಸಾಗಾಟ – ಸರ್ಕಾರಿ ಸೊತ್ತುಗಳಿಗೆ ಜವಾಬ್ಧಾರಿ ಯಾರು?
ಕುಂದಾಪುರ: ಸರ್ಕಾರೀ ಇಲಾಖೆಗಳಲ್ಲಿ ನಡೆಯುವ ಅಕ್ರಮ ವ್ಯವಹಾರಗಳು ಸದ್ದಿಲ್ಲದೇ ನಡೆಯುತ್ತಿವೆ. ಕೆಲವೊಂದು ಸಾರ್ವಜನಿಕರ ಕಣ್ಣಿಗೆ ಬಿದ್ದು ಸುದ್ದಿಯಾದರೆ ಇನ್ನು ಹಲವು ಅಧಿಕಾರಿಗಳ ನಿದ್ದೆಗಣ್ಣಿನಿಂದ ಅವ್ಯಾಹತವಾಗಿ ನಡೆಯುತ್ತಿರುತ್ತವೆ.

ಕುಂದಾಪುರದಲ್ಲಿ ಸರ್ಕಾರೀ ಹಿಂದುಳಿದ ವರ್ಗಗಳ ಬಾಲಕಿಯರ ವಸತಿನಿಲಯದಿಂದ ಕಳೆದ ಭಾನುವಾರ ಸಂಜೆ ವಸತಿನಿಲಯದ ಒಳಗಿನಿಂದ ಚೀಲವೊಂದನ್ನು ಖಾಸಗೀ ಕಾರಿನಲ್ಲಿ ತುಂಬಿಸಿ ಕೊಂಡೊಯ್ಯಲಾಗಿದೆ. ವಿಶೇಷವೆಂದರೆ ಹಾಸ್ಟೆಲ್ ಅಡುಗೆಯವರೇ ಸ್ವತಃ ಚೀಲವನ್ನು ಕಾರಿಗೆ ತುಂಬಿಸುತ್ತಿರುವುದಲ್ಲದೇ ಕಾರಿನಲ್ಲಿ ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಆಶಾದೇವಿ ನಾಯಕ್, ಕಾರಿನಲ್ಲಿ ಕೊಂಡೊಯ್ದಿರುವ ಚೀಲ ಅಕ್ಕಿ ಸೋಸಿದ ತ್ಯಾಜ್ಯವಾಗಿದ್ದು, ವೆಲ್ಫೇರ್ ಅಧಿಕಾರಿಗಳು ಆ ಚೀಲವನ್ನು ತ್ಯಾಜ್ಯ ಡಬ್ಬಕ್ಕೆ ಹಾಕಿ ಎಂದಿದ್ದರು. ಆದರೆ ಅಡುಗೆಯವರಾದ ಸೂರ್ಯಕಲಾ ಅವರು ಅದು ತ್ಯಾಜ್ಯ ಎನ್ನುವ ಕಾರಣಕ್ಕೆ ಮನೆಯ ಕೋಳಿಗಳಿಗೆ ಹಾಕಲು ಕೊಂಡೊಯ್ದಿದ್ದಾರೆ ಎಂದಿದ್ದಾರೆ.
ಒಟ್ಟಿನಲ್ಲಿ ಸರ್ಕಾರದ ಯಾವುದೇ ಪದಾರ್ಥ ಅಥವಾ ಸೊತ್ತುಗಳನ್ನು ಕೊಂಡೊಯ್ಯಬೇಕಾದರೆ ಇರುವ ಕನಿಷ್ಟ ನಿಯಮಗಳನ್ನೂ ಪಾಲಿಸದೇ ಇರುವುದು ಮತ್ತು ಅಕ್ರಮವಾಗಿ ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು ಈ ನಿಟ್ಟಿನಲ್ಲಿ ಇಲಾಖೆ ಯಾವ ಕ್ರಮಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.