ಕೋಟ: ಗ್ರಾಮ ಪಂಚಾಯತ್ ಉಪಾಧ್ಯಕ್ಷೆಗೆ ಹೆಜ್ಜೇನು ದಾಳಿ

ಕೋಟ: ದೇವಸ್ಥಾನಕ್ಕೆ ಪೂಜೆಗೆಂದು ತೆರಳುತ್ತಿದ್ದ ವೇಳೆ ಕೋಟತಟ್ಟು ಗ್ರಾಮಪಂಚಾಯತ್ ಉಪಾಧ್ಯಕ್ಷೆ ಹಾಗೂ ಅವರ ಮಗಳಿಗೆ ಹೆಜ್ಜೇನು ದಾಳಿ ನಡೆಸಿದ ಘಟನೆ ಇಂದು ಗುರುವಾರ ಬೆಳಿಗ್ಗೆ ನಡೆದಿದೆ. ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಹಾಗೂ ಅವರ ಮಗಳು ಸೌಜನ್ಯ ಜೇನು ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡವರು.

ಗುರುವಾರ ಮುಂಜಾನೆ ಈ ಇರ್ವರು ತಮ್ಮ ಮೂಲ ನಾಗಬನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಹೆಜ್ಜೇನು ಪೂರ್ಣಪ್ರಮಾಣದಲ್ಲಿ ದಾಳಿ ನಡೆಸಿವೆ. ಈ ಸಂದರ್ಭ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರ ಸ್ಥಳೀಯರು ಧಾವಿಸಿ ಜೀವದ ಹಂಗು ತೊರೆದು ಜೇನು ದಾಳಿಗೊಳಗಾದವರ ಮೈಮೇಲೆ ಗೋಣಿಚೀಲ ಹಾಗೂ ಬಟ್ಟೆ ಹಾಕಿ ದಾಳಿಯಿಂದ ರಕ್ಷಣೆ ನೀಡಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಇಂದು ಮುಂಜಾನೆ ಕೋಟತಟ್ಟು ತುಂಗರ ಮನೆ ಸಮೀಪವಿರುವ ನಾಗಬನಕ್ಕೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ತಾಯಿ ಸರಸ್ವತಿ ಹಾಗೂ ಪುತ್ರಿ ಸೌಜನ್ಯ ತೆರಳುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮರದ ಕೊಂಬೆಯಲ್ಲಿ ಗೂಡು ಕಟ್ಟಿಕೊಂಡಿದ್ದ ಜೇನುನೊಣಗಳು ಏಕಾಏಕಿ ಪಾರ್ಥನೆ ಸಲ್ಲಿಸುವವರ ಮೇಲೆ ದಾಳಿ ಮಾಡಿದೆ. ದಾಳಿಗೊಳಗಾದಾಗ ದಿಕ್ಕು ಕಾಣದ ಇಬ್ಬರೂ ಕಿರುಚುತ್ತಾ ಓಡಿ ಬಂದಿದ್ದಾರೆ. ಆದರೂ ಜೇನುನೊಣಗಳು ದಾಳಿ ಮುಂದುವರೆಸಿವೆ. ಈ ಸಂದರ್ಭ ರಕ್ಷಣೆಗೆ ಧಾವಿಸಿದ ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ತಮ್ಮ ಜೀವ ಲೆಕ್ಕಿಸದೆ ಅವರ ಸಹಾಯಕ್ಕೆ ನಿಂತ್ತಿದ್ದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ. ಸತೀಶ್ ಕುಂದರ್ ಮೇಲೆ ಸಾಕಷ್ಟು ಜೇನುಗಳು ದಾಳಿ ಮಾಡಿವೆ. ಮೈತುಂಬ ಕಂಚಿಕೊಂಡ ಜೇನುಗಳನ್ನು ತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಕೋಟದ ನಾಗರಾಜ್ ಪುತ್ರನ್ ಜೀವನ್ ಮಿತ್ರ ಆಂಬ್ಯುಲೇನ್ಸ್ ಮೂಲಕ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.