*ಅಮಾಸೆಬೈಲು: ದೇಶ ಕಂಡ ದಿಟ್ಟ, ಪ್ರಾಮಾಣಿಕ ರಾಜಕಾರಣಿ ಎ.ಜಿ.ಕೊಡ್ಗಿ : ಶಾಸಕ ಗುರ್ಮೆ*
ಅಮಾಸೆಬೈಲಿನಲ್ಲಿ ಎ.ಜಿ.ಕೊಡ್ಗಿ ಒಂದು ನೆನಪು
ಕುಂದಾಪುರ : ದೇಶ ಕಂಡ ದಿಟ್ಟ, ಪ್ರಾಮಾಣಿಕ ರಾಜಕಾರಣಿ ಎ.ಜಿ.ಕೊಡ್ಗಿ. ರಾಜಕೀಯ, ಕೃಷಿ, ನೆಲ, ಜಲ, ಸಂಸ್ಕೃತಿಯನ್ನು ಸಮವಾಗಿ ಪ್ರೀತಿಸುತ್ತಿದ್ದ ದಿವಂಗತ ಎ.ಜಿ.ಕೊಡ್ಗಿಯವರು ಸಾರ್ವಕಾಲಿಕ ಸ್ಮರಣೀಯರು.ಅಮಾಸೆಬೈಲಿನಂತಹಾ ಕತ್ತಲ ಕುಗ್ರಾಮವನ್ನು ಸೋಲಾರ್ ಬೆಳಕಿನ ಮೂಲಕ ಬೆಳಗಿಸಿದ ಪುಣ್ಯಾತ್ಮ ದಿ. ಎ.ಜಿ.ಕೊಡ್ಗಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.


ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲು ಸಭಾಂಗಣದಲ್ಲಿ ನಡೆದ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ.), ಅಮಾಸೆಬೈಲು ಕರ್ಣಾಟಕ ಬ್ಯಾಂಕ್ (ಲಿ.), ಬೆಂಗಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಧರ್ಮಸ್ಥಳ ಗ್ರಾಮ ಪಂಚಾಯತ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಅಮಾಸೆಬೈಲು ಹಾಗೂ ದಿ. ಎ. ಜಿ. ಕೊಡ್ಲಿ ಅಭಿಮಾನಿ ಬಳಗ ಇವರ ಸಹಯೋಗದಲ್ಲಿ ಕೊಡ್ಗಿ ನೆನಪು ಮತ್ತು ಉತ್ತಮ ಕೃಷಿಕ ಸನ್ಮಾನ ಹಾಗೂ ಶಾಲಾ ಬಸ್ಸು ನಿರ್ವಹಣೆ ಬಗ್ಗೆ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶಕ್ಕಾಗಿ, ಸಮಾಜಕ್ಕಾಗಿ ಕೊಡುಗೆ ನೀಡಿದವರನ್ನು ನೆನಪಿಸಿಕೊಳ್ಳದೇ ಇದ್ದರೆ ಅದಕ್ಕಿಂತ ದೊಡ್ಡ ಕೃತಘ್ನತೆ ಇನ್ನೊಂದಿಲ್ಲ. ಕೊಡ್ಗಿಯವರು ಸಾಮಾನ್ಯ ಚಿಂತನೆಯ ಮಿತಿಗೆ ನಿಲುಕದ ವ್ಯಕ್ತಿತ್ವ ಹೊಂದಿದ್ದವರು. ಪಂಚಾಯತ್ ರಾಜ್ ಬಲವರ್ಧನೆಗೆ ಅವರ ಕೊಡುಗೆ ಅನನ್ಯ ಎಂದರು.


ಇದೇ ಸಂದರ್ಭ ಸಾಧಕ ಕೃಷಿಕ ಶೀನ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಶಾಲೆಯ ಬಸ್ ನಿರ್ವಹಣೆಗೆ ಚೆಕ್ ವಿತರಿಸಲಾಯಿತು. ಮಂಗಳೂರು ಕರ್ಣಾಟಕ ಬ್ಯಾಂಕ್ ಲಿ., ಡಿ.ಜಿ.ಎಮ್. ಗೋಪಾಲಕೃಷ್ಣ ಸಾಮಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಿರಣ್ ಕುಮಾರ್ ಕೊಡ್ಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್., ಅಮಾಸೆಬೈಲು ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಕುಲಾಲ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷ ಲಕ್ಷ್ಮಣ್ ಪೂಜಾರಿ ಉಪಸ್ಥಿತರಿದ್ದರು.


ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ ಕುಮಾರ ಕೊಡ್ಗಿ ಸ್ವಾಗತಿಸಿ, ಅಮಾಸೆಬೈಲು ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಶಶಿಧರ ಶೆಟ್ಟಿ ವಂದಿಸಿದರು. ಸತ್ಯನಾರಾಯಣ ರಾವ್ ರಟ್ಟಾಡಿ ನಿರೂಪಿಸಿದರು.