*ಕೋಟ : ಭಾರತೀಯರ ಗೋ ಆರಾಧನೆ ಶ್ರೇಷ್ಠವಾದದ್ದು – ಲಿಯಾಖತ್ ಆಲಿ*
ಪಂಚವರ್ಣದಿಂದ ಸಾಮೂಹಿಕ ಗೋಪೂಜೆ
ಕೋಟ: ಗೋವುಗಳಿಗೆ ಭಾರತದಲ್ಲಿ ಮಹತ್ವವಾದ ಸ್ಥಾನ ಹಾಗೂ ಆರಾಧನೆ ನಡೆಯುತ್ತದೆ ಎಂದು ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಲಿಯಾಖತ್ ಆಲಿ ಹೇಳಿದರು. ಅವರು ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮೂಡುಗೋಪಾಡಿ ರಫೀಕ್ ಸಾಹೇಬರ ಹೈನುಗಾರಿಕಾ ಫಾರ್ಮನಲ್ಲಿ ಹಮ್ಮಿಕೊಂಡ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿ ವಿಶಿಷ್ಠವಾದದ್ದು. ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆ ಸಾಮರಸ್ಯ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಗೋಪೂಜೆಯನ್ನು ಉದ್ಘಾಟಿಸಿದ ಬಿಜೆಪಿ ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮಾತನಾಡಿ, ಗೋ ಪೂಜೆ ಪ್ರತೀ ವರ್ಷವೂ ನಡೆಯಲಿ. ಸಮಾಜಮುಖಿ ಚಿಂತನೆಗಳೊಂದಿಗೆ ಪರಿಸರ ಜಾಗೃತಿಯ ದಾಖಲೆ ನಿರ್ಮಿಸುವ ಪಂಚವರ್ಣ ಸಂಸ್ಥೆಯ ಕಾರ್ಯ ಪ್ರತಿಯೊಂದು ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.

ಪಂಚವರ್ಣ ಮಹಿಳಾ ಮಂಡಲದ ಮಹಿಳೆಯರು ಗೋ ಮಾತೆಗೆ ಪೂಜೆ ನೆರವೇರಿಸಿದರು. ಹೈನುಗಾರಿಕೆಯ ಪಾರ್ಮ ಮುಖ್ಯಸ್ಥ ರಫೀಕ್ ಸಾಹೇಬ್ ಗೋವಿನ ಹೆಸರಿನೊಂದಿಗೆ ಗಿಡ ನಡುವ ಮೂಲಕ ಪರಿಸರ ಜಾಗೃತಿ ಮೆರೆದರು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ವಿಪ್ರ ಮಹಿಳಾ ವೇದಿಕೆಯ ಅಧ್ಯಕ್ಷೆ ವನಿತಾ ಉಪಾಧ್ಯ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಕೋಟ,ಫಾರ್ಮನ ಪ್ರಮುಖರಾದ ಹನೀಫ್ ಸಾಹೇಬ್ ಮತ್ತಿತರರು ಇದ್ದರು. ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಕೆ.ಹಂದಟ್ಟು ಪ್ರಾಸ್ತಾವಿಸಿದರು. ಪಂಚವರ್ಣ ಯುವಕ ಮಂಡಲ ಸದಸ್ಯ ಕಾರ್ತಿಕ್ ಎನ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.