ಕುಂದಾಪುರ : ಕಳವು ಆರೋಪಿಗಳಿಬ್ಬರ ಬಂಧನ

ಕುಂದಾಪುರ: ಇಲ್ಲಿನ ನಗರ ಹಾಗೂ ಹೊರವಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕುಂದಾಪುರ ಪೊಲಿಸರು ಬಂಧಿಸಿದ್ದಾರೆ. ಆ ಪೈಕಿ ಒಬ್ಬಾತ ಅಪ್ರಾಪ್ತನಾಗಿದ್ದು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಎಂದು ತಿಳಿದು ಬಂದಿದೆ. ಇನ್ನೊಬ್ಬ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಎಂದು ಗುರುತಿಸಲಾಗಿದೆ.
ನವೆಂಬರ್ 16ರಂದು ಮಧ್ಯರಾತ್ರಿ 2.45ರ ಸುಮಾರಿಗೆ ಕೋಣಿಯ ಬ್ಯಾಂಕಿನ ಎಟಿಎಂಗೆ ನುಗ್ಗಿ ಯಂತ್ರ ತೆರೆಯಲು ಯತ್ನಿಸುತ್ತಿರುವಾಗ ಹೈದರಾಬಾದ್ನ ಸೆಕ್ಯೂರಿಟಿ ಸಂಸ್ಥೆಯವರು ಎಚ್ಚರಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಅಷ್ಟರಲ್ಲಿ ಕಳ್ಳರು ಬರಿಗೈಯಲ್ಲಿ ವಾಪಾಸು ಹೋಗಿರುವುದಾಗಿದೆ. ಎಟಿಎಂ ನಿರ್ವಹಿಸುವ ಸಂಸ್ಥೆಯ ಭದ್ರತಾ ನಿಗಾ ವಹಿಸುವವರು ಹೈದರಾಬಾದಿನಲ್ಲಿ ಸಿಸಿ ಟಿವಿ ಮಾನಿಟರಿಂಗ್ ಮಾಡುತ್ತಿದ್ದು, ಅವರ ಗಮನಕ್ಕೆ ಬಂದ ತತ್ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿಯೇ ಎಸ್ಐ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ನೀಡಿತ್ತು. ಆದರೆ ಅಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು.
ಇದಕ್ಕೂ ಮುಂಚೆ, ಕುಂದಾಪುರದ ನಗರ ಭಾಗದ ಅಪೋಲೋ ಮೆಡಿಕಲ್ಸ್, ಫೇಮಸ್ ಫುಟ್ ವೇರ್ ಅಂಗಡಿಗೆ ನುಗ್ಗಿದ್ದ ಕಳ್ಳರು ಕಳವು ನಡೆಸಿ ಪರಾರಿಯಾಗಿದ್ದರು. ಕುಂದಾಪುರ ವೃತ್ತ ನಿರೀಕ್ಷಕ ನಂಜಪ್ಪ ಎನ್., ಎಸ್ಐಗಳಾದ ವಿನಯ್ ಎಂ. ಕೊರ್ಲಹಳ್ಳಿ, ಪುಷ್ಪಾ, ಸಿಬಂದಿ ಮೋಹನ, ಸಂತೋಷ, ಅವಿನಾಶ, ಶ್ರೀಧರ, ಘನಶ್ಯಾಮ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳಿಬ್ಬರೂ ಕುಂದಾಪುರ ಮಾತ್ರವಲ್ಲದೆ, ಬೆಳ್ತಂಗಡಿ ಠಾಣೆ, ಪಡುಬಿದ್ರಿ ಠಾಣೆ, ಬಳ್ಳಾರಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಬ್ಯಾಂಕ್ ಕಳ್ಳತನ, ಬೈಕ್ ಕಳ್ಳತನ, ಅಂಗಡಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೊಪ್ಪಳದಿಂದ ಬಂದು ರಾತ್ರಿ ವೇಳೆ ಕಳ್ಳತನ ನಡೆಸಿ ಮತ್ತೆ ಊರಿಗೆ ತೆರಳುತ್ತಿದ್ದರು ಎನ್ನಲಾಗಿದೆ.
