ಬೈಂದೂರು: ಶತಮಾನ ಕಂಡ ಎಳಜಿತ್ ಶಾಲೆಗೆ ನಾಡೋಜ ಎಸ್. ಷಡಕ್ಷರಿಯವರಿಂದ 25 ಲಕ್ಷ ದೇಣಿಗೆ!
ಕುಂದಾಪುರ: ಶತಮಾನೋತ್ಸವದ ಸಂದರ್ಭದಲ್ಲಿರುವ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಬೆಂಗಳೂರಿನ ರಮಣಶ್ರೀ ಗ್ರೂಪ್ ಸಂಸ್ಥೆ ಮುಂದೆ ಬಂದಿದೆ. ವಾಲ್ಮೀಕಿ ಜಯಂತಿ ದಿನವಾದ ಗುರುವಾರ ಬೆಳಿಗ್ಗೆ ಶಾಲೆಗೆ ಭೇಟಿ ನೀಡಿದ ಸಂಸ್ಥೆಯ ಮುಖ್ಯಸ್ಥ ನಾಡೋಜ ಎಸ್. ಷಡಕ್ಷರಿ ಅವರು ಕಟ್ಟಡ ನಿರ್ಮಾಣಕ್ಕೆ ಅರ್ಧದಷ್ಟು ಹಣ ಅಂದರೆ 25 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.



ಗುರುವಾರ ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದ ಬಳಿಕ ಕುಟುಂಬ ಸಮೇತರಾಗಿ ಬೈಂದೂರು ತಾಲೂಕಿನ ಯಳಜಿತ್ ನಲ್ಲಿರುವ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ನಿರ್ಮಾಣ ಹಂತದಲ್ಲಿರುವ ರಂಗ ಮಂದಿರ ಹಾಗೂ ಎರಡು ತರಗತಿ ಕೋಣೆಗಳನ್ನು ವೀಕ್ಷಿಸಿದರು. ಬಳಿಕ ವಾಲ್ಮೀಕ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಶತಮಾನ ಕಂಡ ಶಾಲೆಗೆ ನನ್ನದೊಂದು ಕಿರು ಕಾಣಿಕೆ ನೀಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಗ್ರಾಮಿಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆದಾಗ ದೇಶ ಸದೃಢವಾಗುತ್ತದೆ ಎಂದರು.





ಇದೇ ಸಂದರ್ಭ ಹಾಜರಿದ್ದ ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಮಾತನಾಡಿ, ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ತ್ರೀ ಹಂಡ್ರೆಡ್ ಟ್ರೀಸ್ ಯೋಜನೆಯಲ್ಲಿ ಆಯ್ಕೆಯಾದ ೆಳಜಿತ್ ಶಾಲೆಗೆ ನಾಡೋಜ ಷಡಕ್ಷರಿ ಕೊಡುಗೆ ಸ್ಮರಣೀಯ ಎಂದರು





ಈ ಸಂದರ್ಭ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಂಗೇಶ್ ಶಾನುಭಾಗ್, ಹಾಗೂ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಬಿಜೂರು ಗ್ರಾಮ ಪಂಚಾಯತ್ ಸದಸ್ಯ ವೀರೇಂದ್ರ ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸದಾಶಿವ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.




