ಬೈಂದೂರು: ಬೈಂದೂರು ಉತ್ಸವ ಸಮೃದ್ಧತೆಯ ಮೊದಲ ಹೆಜ್ಜೆ – ನಿರಂತರತೆಯ ಮೂಲಕ ಅಭಿವೃದ್ದಿಯ ಕನಸು ನನಸಾಗಲಿದೆ – ಶಾಸಕ ಗಂಟಿಹೊಳೆ
ಬೈಂದೂರು: ಸಮೃದ್ಧ ಬೈಂದೂರಿನ ಪರಿಕಲ್ಪನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿರುವ ಬೈಂದೂರು ಉತ್ಸವ 2024 ಬೈಂದೂರಿನ ಸಮಗ್ರ ಅಭಿವೃದ್ಧಿಗೆ ಇಡಲಾಗುವ ಮೊದಲ ಹೆಜ್ಜೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.


ಅವರು ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದರು. ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಯೋಜನೆ ಇದಾಗಿದ್ದು, ಕಾರ್ಯಕ್ರಮಗಳು ಇಲ್ಲಿಗೇ ನಿಲ್ಲುವುದಿಲ್ಲ. ಬೈಂದೂರು ಉತ್ಸವ ಇಡೀ ಬೈಂದೂರು ಕ್ಷೇತ್ರವನ್ನು ಪ್ರತಿನಿಧಿಸುವುದರಿಂದ ಎಲ್ಲಾರೂ ಭಾಗವಹಿಸಿ ಯಶಸ್ವಿಗೊಳಿಸಬೇಕಿದೆ ಎಂದು ಕರೆ ನೀಡಿದರು. ಎಲ್ಲರ ಸಹಕಾರದೊಂದಿಗೆ ಬೈಂದೂರು ಉತ್ಸವ ಅಭಿವೃದ್ದಿ ಕಲ್ಪನೆಯ ಕನಸಿನ ತೇರು ಎಳೆಯಬೇಕಿದೆ ಉತ್ಸವದ ಮೂಲಕ ಬೈಂದೂರು ಸಂಭ್ರಮಿಸಲಿದೆ ಎಂದರು.


ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಮಾತನಾಡಿ, ಬೈಂದೂರಿನ ಪ್ರತಿಭೆಗಳಿಗೆ ಅವಕಾಶ ನೀಡುವ ಜೊತೆಗೆ ವಿಶ್ವಮಟ್ಟದ ಹೂಡಿಕೆದಾರರನ್ನು ಕರೆಯುವ ಕನಸು ನಮ್ಮದು. ಕೃಷಿ ಕೈಗಾರಿಕೆ, ಮೀನುಗಾರಿಕೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಉತ್ತೇಜನ, ಶಿಕ್ಷಣ, ಪರಿಸರ, ಆರೋಗ್ಯ ವಿಚಾರಗಳಲ್ಲಿ ನೈತಿಕ ಶಿಕ್ಷಣ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದರು.


ಉದ್ಯಮಿ ಜಿ.ಗೋಕುಲ ಶೆಟ್ಟಿ, ಜಯಾನಂದ ಹೋಬಳಿದಾರ್, ಗೌರಿ ದೇವಾಡಿಗ, ತಂಗಪ್ಪನ್, ಮಂಜುನಾಥ ಪೂಜಾರಿ ಸಸಿಹಿತ್ಲು, ಸಂಚಾಲಕ ಶ್ರೀ ಗಣೇಶ ಉಪ್ಪುಂದ, ಅನಿತಾ ಅರ್.ಕೆ, ಭಾಗೀರಥಿ ಸುರೇಶ್, ಸುರೇಂದ್ರ ಖಾರ್ವಿ ಉಪಸ್ಥಿತರಿದ್ದರು. ಪುಷ್ಪರಾಜ್ ಶೆಟ್ಟಿ ಶಿರೂರು ಸ್ವಾಗತಿಸಿ ವಂದಿಸಿದರು.

