ಬೆಳ್ಳಾರೆ: ಹಿಂದೂ ಹೆಣ್ಮಕ್ಕಳಿಗೆ ಅವಹೇಳನ – ಅರಣ್ಯಾಧಿಕಾರಿ ಸಂಜೀವ ಪೂಜಾರಿ ಬಂಧನ!
ಬೆಳ್ಳಾರೆ: ಮೊಬೈಲ್ ಸಂಭಾಷಣೆ ಸಂದರ್ಭ ಭಜನೆಗೆ ಹೋಗುವ ಹೆಣ್ಮಕ್ಕಳನ್ನು ಹಿಂದೂ ಯುವಕರು ವೇಶ್ಯೆಯನ್ನಾಗಿ ಮಾಡಿರುವುದಕ್ಕೆ ಹತ್ತು ಸಾವಿರದಷ್ಟು ದಾಖಲೆಗಳಿವೆ ಎಂದು ಗಂಭೀರ ಆರೋಪ ಹೊರಿಸಿದ್ದ ಪಂಜ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅರಣ್ಯಾಧಿಕಾರಿ ಸಂಜೀವ ಪೂಜಾರಿ ಹೇಳಿಕೆಗೆ ತಿರುಗಿಬಿದ್ದ ಹಿಂದೂ ಸಂಘಟನೆ ಮತ್ತು ಯುವತಿಯರು ಬೆಳ್ಳಾರೆ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರಕರಣವೂ ದಾಖಲಾಗಿತ್ತು. ಇಂದು ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗ ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆದ ಸಂದರ್ಭ ಡಿವೈಎಸ್ಪಿ ಕ್ರಮ ಜರುಗಿಸುವ ಭರವಸೆ ನೀಡಿದ್ದ ಬಳಿಕ ಸಂಜೀವ ಪೂಜಾರಿ ಬಂಧನಕ್ಕೆ ಇಂದು ಸಂಜೆಯವರೆಗೆ ಹಿಂಜಾವೇ ಗಡುವು ನೀಡಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು.

ಇದರ ಬೆನ್ನಿಗೇ ಆರೋಪಿ ಸಂಜೀವ ಪೂಜಾರಿಯವರನ್ನು ಪೊಲೀಸರು ಅವರ ಮನೆಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇದು ಬಂಧನವೋ ಅಥವಾ ತನಿಖೆಗಾಗಿ ವಶಪಡಿಸಿಕೊಂಡಿರುವುದೋ ತಿಳಿದು ಬಂದಿಲ್ಲ.