ಕುಂದಾಪುರ: ಕಲಾಕ್ಷೇತ್ರದ ಸಾರಥ್ಯದಲ್ಲಿ ಕುಣಿದಾಡಿದ ಹುಲಿಗಳು! ಸಂಪ್ರದಾಯದ ಉಳಿವಿಗೆ ಹೊಸ ಪ್ರಯತ್ನ


ಕುಂದಾಪುರ: ಜಾನಪದ ಕಲೆಗಳ ವೈಶಿಷ್ಟ್ಯಗಳಿಗೆ ಹೆಸರಾದ ಕರ್ನಾಟಕದ ಕರಾವಳಿ, ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಹುಲಿಕುಣಿತಗಳಿಗೆ ಇತ್ತೀಚಿನ ಕಾಲಘಟ್ಟದಲ್ಲಿ ವಿಶೇಷ ಪ್ರಾತಿನಿಧ್ಯ ದೊರೆಯುತ್ತಿದೆ. ಅಳಿವಿನಂಚಿನಲ್ಲಿರುವ ಗ್ರಾಮೀಣ ಭಾಗಗಳ ಹುಲಿಕುಣಿತದ ಉಳಿವಿಗೆ ಮತ್ತು ಬೆಳವಣಿಗೆ ಪ್ರಯತ್ನಿಸುತ್ತಿರುವ ಕುಂದಾಪುರದ ಕಲಾಕ್ಷೇತ್ರ ಸಂಘಟನೆ ಹಮ್ಮಿಕೊಂಡಿದ್ದ ನವರಾತ್ರಿ ಸಂದರ್ಭದಲ್ಲಿ ವಿಶೇಷ ಹುಲಿಕುಣಿತ ಜನಮನಸೂರೆಗೊಂಡಿತು.


ಕುಂದಾಪುರ ಕಲಾಕ್ಷೇತ್ರದ ಸಾರಥ್ಯದಲ್ಲಿ ಗುರುವಾರ ಸಂಜೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸಾವಿರಾರು ಕಲಾಪ್ರೇಕ್ಷಕರ ಸಮ್ಮುಖದಲ್ಲಿ ಪರಂಪರೆಯ ಕುಂದಾಪುರ ಹುಲಿ ಕುಣಿತ ನಡೆಯಿತು. ರಾಜೀವ ಕೋಟ್ಯಾನ್ ಹುಲಿವೇಷದ ಗೊಂಡೆಗೆ ಪಟ್ಟಿ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಮಂಗಳೂರು, ಉಡುಪಿ ಹುಲಿವೇಷದಂತೆ ಕುಂದಾಪುರದ ಹುಲಿವೇಷಕ್ಕೇ ವಿಶೇಷ ಮಹತ್ವವಿದೆ. ಬೇರೆ ಬೇರ ಭಾಗದ ಹುಲಿವೇಷಗಳಿಗೆ ಹೋಲಿಸಿದರೆ ಕುಂದಾಪುರ ಹುಲಿವೇಷದ ಪರಂಪರೆ, ವೈವಿಧ್ಯತೆ, ಪೂರ್ವ ಹಿನ್ನೆಲೆ, ಧಾರ್ಮಿಕ ಕಟ್ಟುಪಾಡುಗಳು ವಿಶೇಷವಾದುದು. ಇಂಥಹ ಅಪರೂಪದ ಕುಂದಾಪುರ ಹುಲಿ ಕುಣಿತವನ್ನು ಉಳಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಸಂಕಲ್ಪವನ್ನು ಕಲಾಕ್ಷೇತ್ರ ಮಾಡಿದೆ ಎಂದರು.


ಈ ಸಂದರ್ಭದಲ್ಲಿ ಹುಲಿವೇಷ ಕುಣಿತದ ಹಿನ್ನೆಲೆ ವಾದಕರಾದ ಡಾ.ಮಂಜನಾಥ ದೇವಾಡಿಗ, ಸುರೇಶ, ಪ್ರತಾಪ್, ರಾಜೇಶ್, ಮಂಜುನಾಥ ದೇವಾಡಿಗ, ಸುಬ್ರಹ್ಮಣ್ಯ ಹಾಗು ಹುಲಿವೇಷಧಾರಿಗಳನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.


ಕಾರ್ಯಕ್ರಮದಲ್ಲಿ ಗೀತಗಾಯನ ಸಂಸ್ಥೆಯ ಸನತ್ ಕುಮಾರ್ ರೈ, ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿ ಅಲ್ಮೇಡಾ, ಪುರಸಭೆ ಸದಸ್ಯ ಗಿರೀಶ್ ಜಿ.ಕೆ, ಮಹೇಶ ಪೂಜಾರಿ, ಮೋಹನ ಸಾರಂಗ, ದಾಮೋದರ ಪೈ, ಜೋಯ್ ಕರ್ವೆಲ್ಲೊ, ಸಾಯಿನಾಥ ಶೇಟ್, ಪ್ರವೀಣ ಕುಮಾರ್, ತ್ರಿವಿಕ್ರಮ ಪೈ ಮೊದಲಾದವರು ಉಪಸ್ಥಿತರಿದ್ದರು. ರಾಮಚಂದ್ರ ಮತ್ತು ರಾಜೇಶ ಕಾವೇರಿ ನಿರ್ವಹಿಸಿದರು.