ಕುಂದಾಪುರ: ಸಮುದ್ಯತಾ ಸಂಸ್ಥೆಯಿಂದ ಕುಂದಾಪುರದ ಮೊದಲ ನೇರ ಮಾರುಕಟ್ಟೆ ಎಪ್ಲಿಕೇಷನ್ ಲೋಕಾರ್ಪಣೆ

ಕುಂದಾಪುರ: ಕುಂದಾಪುರ ತಾಲೂಕಿನ ಇತಿಹಾಸದಲ್ಲಿ ಆಹಾರ ಕ್ಷೇತ್ರದಲ್ಲಿ ಮೊತ್ತ ಮೊದಲ ಸ್ವತಂತ್ರ ನೇರ ಮಾರುಕಟ್ಟೆಯ ಎಪ್ಲಿಕೇಷನ್ ನ್ನು ಸಮುದ್ಯತಾ ಗ್ರೂಪ್ ಸಂಸ್ಥೆ ಶನಿವಾರ ಸಂಜೆ ಲೋಕಾರ್ಪಣೆಗೊಳಿಸಿದೆ.

ಸಂಸ್ಥೆಗೆ ಒಂದು ವರ್ಷ ತುಂಬಿದ ಸಂಭ್ರಮದಲ್ಲಿ ಗ್ರಾಹಕರಿಗೆ ಈ ವಿಶೇಷ ಕೊಡುಗೆ ನೀಡಲಾಗುತ್ತಿದ್ದು, ಕುಂದಾಪುರದ ಪುರಸಭಾ ವ್ಯಾಪ್ತಿಯಿಂದ 14 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣವೆಚ್ಚ, ಒಳವೆಚ್ಚ ರಹಿತ ಮನೆ ಬಾಗಿಲಿಗೆ ಸರಬರಾಜು ಮಾಡಲಾಗುತ್ತದೆ ಎಂದು ಸಮುದ್ಯತಾ ಮಾಲಕ ಯೋಗೇಂದ್ರ ಕಾಂಚನ್ ಹೇಳಿದರು.

ಕೋಟದ ಜನತಾ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಶಾಂತ್ ಎ ಕುಂದರ್ ಉದ್ಘಾಟಿಸಿ ಮಾತನಾಡಿ, ಉತ್ತಮ ತಂಡ, ಗುಣಮಟ್ಟದ ಆಹಾರ, ಸಮಯ ಪಾಲನೆಯಿಂದ ಉದ್ಯಮದಲ್ಲಿ ಯಶಸ್ಸು ಸಾಧ್ಯ ಎಂದರು.

ಇದೇ ಸಂದರ್ಭ ಸಂಸ್ಥೆಯ ಸುಮಾರು ನೂರಕ್ಕೂ ಮಿಕ್ಕಿ ಸಿಬ್ಬಂದಿಗಳಿಗೆ ಇಎಸ್ಐ ಮತ್ತು ಪಿ ಎಫ್ ಸೌಲಭ್ಯಗಳನ್ನು ವಿತರಿಸಿದ ಚಾರ್ಟೆಡ್ ಅಕೌಂಟೆಂಟ್ ಕೆ. ಪದ್ಮನಾಭ ಕಾಂಚನ್ ಮಾತನಾಡಿ, ಸಮುದ್ಯತಾ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಆಡಳಿತ ವರ್ಗ ಅತ್ಯುತ್ತಮ ಸೇವಾ ಮನೋಭಾವ ಹೊಂದಿದ್ದು, ಒಂದೇ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗ್ರಾಹಕರನ್ನು ತಲುಪಲು ಯಶಸ್ಸು ಸಾಧಿಸಿರುವುದು ಶ್ಲಾಘನೀಯ ಎಂದರು.



ಖಾಸಗೀ ಆಪ್ ಗಳಿಂದ ಹೋಟೇಲ್ ಉದ್ಯಮ ಬಸವಳಿದು ಹೋಗಿದ್ದು, ಗ್ರಾಹಕರಿಗೆ ಹೊರೆಯಲ್ಲದ ಸ್ವಂತ ಆಪ್ ಬಳಸುವುದು ಉದ್ಯಮಶೀಲತೆಯ ಆದ್ಯತೆಯಾಗಬೇಕು ಎಂದು ಖ್ಯಾತ ಉದ್ಯಮಿ ಹಾಗೂ ಟಿವಿ ನಿರೂಪಕ ರಾಘವೇಂದ್ರ ಕಾಂಚನ್ ಹೇಳಿದರು. ಆಪ್ ಬಿಡುಗಡೆಯ ತಕ್ಷಣ ಉದ್ಯಮಿ ಪ್ರಶಾಂತ್ ಎ ಕುಂದರ್ ಅವರು ಸ್ಥಳದಲ್ಲಿಯೇ ಆನ್ ಲೈನ್ ಮೂಲಕ ಪಾನೀಯ ಆರ್ಡರ್ ಮಾಡಿಸಿಕೊಂಡು ಅತಿಥಿಗಳಿಗೆ ಕೊಟ್ಟು ಸರ್ ಪ್ರೈಸ್ ನೀಡಿದರು.

ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ಕಾಂಚನ್ ಉಪಸ್ಥಿತರಿದ್ದರು. ಸಂಸ್ಥೆಯ ಸಂದೀಪ್ ಆಪ್ ಬಗ್ಗೆ ವಿವರಿಸಿ, ಸಂದೇಶ್ ಶೆಟ್ಟಿ ಸಳ್ವಾಡಿ ನಿರೂಪಿಸಿದರು.