ಹಟ್ಟಿಯಂಗಡಿ: ಕಲಿಕೆ ಜೊತೆಯಲ್ಲಿ ಮಹಾತ್ಮರ ತತ್ವಾದರ್ಶಗಳನ್ನು ರೂಢಿಸಿಕೊಂಡಾಗ ಬದುಕು ಪೂರ್ಣ – ಶರಣ ಕುಮಾರ್
ಕುಂದಾಪುರ: ಪ್ರತಿಯೊಬ್ಬರೂ ತಮ್ಮ ದೈನಂದಿನ ಕಲಿಕೆಯ ಜೊತೆಗೆ ಮಹಾನ್ ವ್ಯಕ್ತಿಗಳ ತತ್ವ ಮತ್ತು ಆದರ್ಶಗಳನ್ನು ಪಾಲಿಸಿಬೇಕು. ಆಗ ಮಾತ್ರ ನಾವು ಕಲಿತ ವಿದ್ಯೆಗೆ ಅರ್ಥ ಸಿಗಲು ಸಾಧ್ಯ, ಗಾಂಧೀಜಿ ಮತ್ತು ಶಾಸ್ತ್ರಿಯವರ ಮೌಲಿಕವಾದ ಆದರ್ಶ ಗುಣಗಳನ್ನು ನಾವು ಪಾಲಿಸುವುದೇ ಮಹಾತ್ಮರ ಆದರ್ಶಗಳಿಗೆ ನಾವು ಕೊಡುವ ಗೌರವ ಎಂದು ಎಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಚಾರ್ಯ ಶರಣ ಕುಮಾರ್ ಹೇಳಿದರು. ಅವರು ಬುಧವಾರ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.




ಸಹ ಶಿಕ್ಷಕಿ ಲತಾ ದೇವಾಡಿಗ ಮಾತನಾಡಿ, ಗಾಂಧೀಜಿಯವರ ಜೀವನದಲ್ಲಿಯ ಕೆಲವು ಮಹತ್ತರ ಘಟನೆಗಳನ್ನು ಉಲ್ಲೇಖಿಸಿ ಮಹಾತ್ಮ ಗಾಂಧೀಜಿಯವರ ಸರಳತೆ, ಸತ್ಯ ಮತ್ತು ಅಹಿಂಸಾ ತತ್ವದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ವಿದ್ಯಾರ್ಥಿಗಳಾದ ಶ್ರೀ ಹರಿ ಮತ್ತು ಶ್ರೀನಿಧಿ ಗಾಂಧೀಜಿಯವರ ವ್ಯಕ್ತಿತ್ವದ ಕುರಿತಾಗಿ ಮಾತನಾಡಿದರು. ಶಿಕ್ಷಕಿ ಬೇಬಿ ನಾಯಕ್ ಮತ್ತು ವಿದ್ಯಾರ್ಥಿಗಳ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಉಪ ಪ್ರಾಂಶುಪಾಲ ರಾಮ ದೇವಾಡಿಗ ಸ್ವಾಗತಿಸಿ ನಿರೂಪಿಸಿದರು. ಸಹ ಶಿಕ್ಷಕಿ ಸವಿತಾ ಭಟ್ ವಂದಿಸಿದರು.


