ಹೆಮ್ಮಾಡಿ: ಸತ್ಯ ಅಹಿಂಸೆಯ ಆದರ್ಶ ಮಹಾತ್ಮಾಗಾಂಧಿಯವರನ್ನು ಖಳನಾಯಕನಂತೆ ಬಿಂಬಿಸುತ್ತಿರುವುದು ಆತಂಕಕಾರಿ – ಶ್ರೀಕಾಂತ್ ಹೆಮ್ಮಾಡಿ

ಕುಂದಾಪುರ: ಈ ದೇಶಕ್ಕೆ ಆದರ್ಶಪ್ರಾಯರಾಗಿ ಜಗತ್ತೇ ಭಾರತದ ಪಿತಾಮಹ ಎಂದು ಕರೆದ ಮಹಾತ್ಮಾ ಗಾಂಧಿಯವರನ್ನು ಸ್ಥಾಪಿತ ಹಿತಾಸಕ್ತಿಗಳು ತಮ್ಮ ರಾಜಕೀಯ ದ್ವೇಷಕ್ಕಾಗಿ ಖಳನಾಯಕನಂತೆ ಬಿಂಬಿಸುತ್ತಿರುವುದು ಭಾರತ ಕಂಡ ಅತ್ಯಂತ ಕಳವಳಕಾರಿ ವಿಚಾರ ಎಂದು ಹೆಮ್ಮಾಡಿಯ ಜನತಾ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪ್ರೌಢ ಶಾಲೆಯಲ್ಲಿ ಬುಧವಾರ ಜರುಗಿದ ಗಾಂಧಿ ಜಯಂತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಉತ್ಸಾಹ ತೋರುತ್ತಾರೋ ಆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಜನತಾ ಪ್ರೌಢ ಶಾಲೆಯ ಶಿಕ್ಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೇರೇಪಿಸಿ, ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಪ್ರಾಕ್ತನ ವಿದ್ಯಾರ್ಥಿಗಳ ಸಾಧನೆಗಳನ್ನು ಬೆನ್ನು ತಟ್ಟಿ, ಸ್ಪೂರ್ತಿ ತುಂಬಿಸುವ ಜೊತೆ ಜೊತೆಗೆ ನಮ್ಮ ವಿದ್ಯಾರ್ಥಿಗಳಿಗೆ ಇಂತಹ ಉದಯೋನ್ಮುಖ ಸಾಧಕರ ಸಾಧನೆ ಪ್ರೇರಣೆಯಾಗಲಿ ಎನ್ನುವುದೇ ಈ ಕಾರ್ಯಕ್ರಮದ ಸದುದ್ದೇಶ ಎಂದರು. ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ ರಾಘವೇಂದ್ರ ಕುಲಾಲ್, ಯುವ ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಸುಜಯ್ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಶ್ರೀಧರ ಗಾಣಿಗ, ಪ್ರವೀತಾ ಅಶೋಕ್, ವಿದ್ಯಾ, ಬೋಧಕೇತರ ಸಿಬ್ಬಂದಿ ಸೌಮ್ಯ, ಪ್ರಾಕ್ತನ ವಿದ್ಯಾರ್ಥಿ ನಾದಶ್ರೀ ಉಪಸ್ಥಿತರಿದ್ದರು. ಶಿಕ್ಷಕ ವಿಠಲ್ ನಾಯ್ಕ್ ಸ್ವಾಗತಿಸಿದರು. ದೇವೇಂದ್ರ ನಾಯ್ಕ್ ವಂದಿಸಿದರು. ಜಗದೀಶ್ ಶೆಟ್ಟಿ ನಿರೂಪಿಸಿದರು.