ವಿದ್ಯಾರಣ್ಯ: ಪರಿಸರ ಸ್ವಚ್ಛತೆ ನಮೆಲ್ಲರ ಹೊಣೆ – ಡಾ.ರಮೇಶ್ ಶೆಟ್ಟಿ
ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ


ಕುಂದಾಪುರ: ಜಗತ್ತಿಗೆ ಗಾಮಧೀಜಿಯವರ ಕೊಡುಗೆ ಅನನ್ಯವಾದುದು. ಸತ್ಯ, ಅಹಿಂಸೆ, ಶಾಂತಿಯ ಮೂಲಕ ಜಗತ್ತಿಗೆ ಮಾದರಿಯಾದ ಮಹಾತ್ಮಾ ಗಾಂಧೀಜಿ ಬದುಕಿನುದ್ದಕ್ಕೂ ಸರಳತೆ ಮತ್ತು ಸ್ವಚ್ಛತೆಯ ಅರಿವು ಮೂಡಿಸಿದವರು, ಅವರು ಹಾಕಿಕೊಟ್ಟ ದಾರಿ ನಮಗೆಲ್ಲಾ ದೀಪವಾಗಬೇಕು ಎಂದು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಹೇಳಿದರು.


ಅವರು ಬುಧವಾರ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕುಂದಾಪುರ, ಸುಜ್ಞಾನ ಪದವಿಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ(ಲಿಟ್ಲ್ ಸ್ಟಾರ್) ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ ಮತ್ಯಾಡಿ ಜೊತೆಯಾಗಿ ಆಯೋಜಿಸಿದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಸ್ವಚ್ಚತಾ ಅಭಿಯಾನ – ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, “ದೇಶದ ಸದೃಢತೆಗೆ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರು ಅನುಸರಿಸಿದ್ದ ಪರಿಸರ ಸ್ವಚ್ಚತೆ ಪ್ರತಿಯೊಬ್ಬರ ಆಧ್ಯತೆಯಾಗಬೇಕು” ಎಂದರು. ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಜಯಂತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪಿ.ಡಬ್ಲ್ಯೂ. ಡಿ. ಪ್ರಥಮ ದರ್ಜೆ ಗುತ್ತಿಗೆದಾರರಾದ ಬಿ.ಅರುಣ್ ಕುಮಾರ್ ಹೆಗ್ಡೆ ಉದ್ಘಾಟಿಸಿದರು. ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ.ಪ್ರಾಸ್ತಾವಿಸಿದರು. ಶಿಕ್ಷಕ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಗುಡ್ಡೆಯಂಗಡಿ ವೃತ್ತದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗಿನ ರಸ್ತೆಯ ಎರಡೂ ಬದಿಗಳಲ್ಲಿನ ಪ್ಲಾಸ್ಟಿಕ್, ಕಸಗಳನ್ನು ತೆಗೆದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು.