ಕುಂದಾಪುರ: ಬಾರ್ ನಲ್ಲಿ ಗಲಾಟೆ – ಬಾಟಲಿ ಇರಿತಕ್ಕೆ ಇಬ್ಬರು ಗಂಭೀರ!

ಕುಂದಾಪುರ: ಇಲ್ಲಿನ ಹೊರವಲಯದಲ್ಲಿರುವ ಬಾರ್ ಎಂಡ್ ರೆಸ್ಟೋರೆಂಟ್ ಒಂದರಲ್ಲಿ ಶುರುವಾರ ಮೂವರ ನಡುವಿನ ಜಗಳ ಹೊಡೆದಾಟಕ್ಕೆ ತಿರುಗಿ ಬಳಿಕ ಬಾಟಲಿ ಇರಿತ ನಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ತಿಕಟ್ಟೆ ಸಮೀಪದ ನಿಸರ್ಗ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಸಮೀಪದ ಕರ್ಕಿ ನಿವಾಸಿ ಅಬಟ ಎಂಬಾತನೆ ಬಾಟಲಿ ದಾಳಿ ಮಾಡಿದ್ದು, ಸಂದೀಪ್ ಹಾಗೂ ಅಭಿ ಎಂಬುವರು ಗಂಭೀರ ಗಾಯಗೊಂಡವರೆನ್ನಲಾಗಿದೆ. ತಲ್ಲೂರು ಹಟ್ಟಿಯಂಗಡಿ ಕ್ರಾಸ್ ನಡುವಿನ ಪಾರ್ತಿಕಟ್ಟೆ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಪಕ್ಕದಲ್ಲಿಯೇ ಇರುವ ನಿಸರ್ಗ ಬಾರ್ ಗೆ ಎಣ್ಣೆ ಹೊಡೆಯಲೆಂದು ಬಂದಿದ್ದವರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಗಂಭೀರ ಗಾಯಗೊಂಡ ಸಂದೀಪ್ ಹಾಗೂ ಅಭಿ ಎಂಬುವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯ ಬಂಧನಕ್ಕೆ ಕಂಡ್ಲೂರು ಪೊಲೀಸರು ಬಲೆ ಬೀಸಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
