ಯಡ್ತಾಡಿಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ – ಹೋರಿಗಳಿಗೆ ಯೆರ್ಥ ನೀಡಿ ಚಾಲನೆ
ಕುಂದಾಪುರ : ವರ್ಷ ಇಡೀ ಗೆದ್ದಿ ಹೂಡಿದ ಹೋರಿ(ಕೋಣ)ಗಳಿಗೆ ಅಕೇರಿಗೆ ಮಾಡು ಹಬ್ಬುವೇ ಯೆರ್ಥ ಕೊಡುದು. ಆವತ್ ಬೆಳ್ಗಾ ಮುಂಚಿ ಹೋರಿಗಳ್ನ್ ಕೆರೀಲ್ ಮೀಸಿ, ಎಣ್ಣಿ ಉದ್ದಿ, ಉದ್ದಿನ್ ಕಾಳ್ ಕಡ್ದ್, ಎಳ್ಳೆಣ್ಣಿ ಕಲ್ಸಿ ಅದನ್ನ್ ತಿಂಬುಕ್ ಕೊಡ್ತ್ ರ್. ಕಡೀಕೆ ಇನ್ನೂ ಬ್ಯಾರ್ ಬ್ಯಾರೆ ತಿಂಡಿ ಕೊಡ್ತ್ರ್. ಅವತ್ ಮನ್ಯಂಗೂ ಭಾರೀ ಹಬ್ಬ ಎಂದು ಕುಂದಾಪ್ರ ಕನ್ನಡದ ಮನು ಹಂದಾಡಿ ಹೇಳಿದರು.

ಅವರು ಚಿತ್ರ ನಟ ದಿ. ಸುನಿಲ್ ರವರ ಯಡ್ತಾಡಿಯ ನಿವಾಸದಲ್ಲಿ ಭಾನುವಾರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಹಬ್ಬಕ್ಕೆ ಸಾಂಕೇತಿಕವಾಗಿ ಮೇವಿನ ಸವಿಯಾದ “ಯೆರ್ಥಾ” ತಯಾರಿಸಿ ಉದ್ಘಾಟಿಸಿ ಮಾತನಾಡಿದರು. ಕೃಷಿ ಪ್ರಧಾನವಾದ ಕುಂದಾಪುರ, ಕರಾವಳಿ ಪ್ರದೇಶಗಳಲ್ಲಿ ಜನರು ಪ್ರಕೃತಿ, ಪ್ರಾಣಿಗಳನ್ನೂ ಹೇಗೆ ಗೌರವಿಸುತ್ತಿದ್ದರು ಎಂಬ ಬಗ್ಗೆ ವಿವರಿಸಿದ ಅವರು, ಇಂತಹ ಹಬ್ಬಗಳ ಮೂಲಕವಾದರೂ ಅಂತಹ ಉತ್ತಮ ಆಚರಣೆಗಳನ್ನು ಜೀವಂತವಾಗಿರಿಸಿಕೊಂಡು ಮುಂದಿನ ಜನಾಂಗಕ್ಕೆ ಶ್ರಮ ಜೀವಿಗಳ ಕಾಯಕಗಳನ್ನು ಪರಿಚಯಿಸಬೇಕು ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪ್ರ ಕನ್ನಡ ಭಾಷೆ ನಮ್ಮ ಬದುಕು ಭಾವನೆಗಳ ಪ್ರತೀಕ. ನಮ್ಮ ಭಾಷೆ ಮಾತಾಡಲು ನಾವು ಹಿಂಜರಿಯಬಾರದು. ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನವಿರಬೇಕು ಎಂದು ಹೇಳಿದರು.
ಕಂಬಳದ ಸರದಾರ ಬಾರ್ಕೂರು ಶಾಂತಾರಾಮ ಶೆಟ್ಟಿ, ಕಂಬಳದ ಹೋರಿಗಳಿಗೆ ಯೆರ್ಥದ ತಿನಿಸುಗಳನ್ನು ನೀಡಿ, ಕುಂದಾಪ್ರ ಕನ್ನಡದ ಮೇಲಿನ ನನ್ನ ಅಭಿಮಾನ, ಪ್ರೀತಿಯಿಂದಲೇ ನಾನು ಈ ಮಣ್ಣಿನ ಸಂಸ್ಕೃತಿಯ ಪ್ರತೀಕವಾದ ಕಂಬಳವನ್ನು ನಡೆಸಿದೆ. ಇದೇ ನನಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಮಾತ್ರವಲ್ಲ, ಹಲವು ಮಂದಿ ಪ್ರೇರಣೆ ಪಡೆದು ಉತ್ತಮ ಕಂಬಳ ಓಟಗಾರರೂ ಮುನ್ನೆಲೆಗೆ ಬಂದರು ಎಂದರು. ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಲಾಕ್ಷೇತ್ರದ ಕಿಶೋರ್ ಕುಮಾರ್, ಜನಸೇವಾ ಟ್ರಸ್ಟ್ ನ ವಸಂತ ಗಿಳಿಯಾರ್ ಶುಭ ಹಾರೈಸಿದರು. ಕೆ. ಸಿ. ರಾಜೇಶ್ ಸ್ವಾಗತಿಸಿ, ವಂದಿಸಿದರು.