ಬೀಜಾಡಿ: ಸಮುದಾಯ ಭಾಗವಹಿಸುವಿಕೆಯಿಂದ ಶಾಲೆಗಳ ಉಳಿವು – ಶಂಕರ ಐತಾಳ್
ಕುಂದಾಪುರ: ಸಮುದಾಯದ ಭಾಗವಹಿಸುವಿಕೆಯಿಂದ ಮಾತ್ರ ಸರ್ಕಾರಿ ಶಾಲೆ ಉಳಿಯಬಲ್ಲುದು. ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಬಳಸಿಕೊಳ್ಳುವಂತಾಗಬೇಕು ಎಂದು ಗೀತಾ ಎಚ್ ಎಸ್ ಎನ್ ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ್ ಹೇಳಿದರು. ಅವರು ಗೀತಾ ಎಚ್ ಎಸ್ ಎನ್ ಫೌಂಡೇಶನ್ ನ ಮೂಲಕ ಸರ್ಕಾರೀ ಪ್ರೌಢ ಶಾಲೆ ಬೀಜಾಡಿ ಇಲ್ಲಿಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ಸ್ ಸೂಟ್ ಹಾಗೂ ಟೀ ಶರ್ಟ್ ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುವ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ವಿತರಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಬಳಸಿಕೊಂಡು ಅಧ್ಯಯನಶೀಲರಾಗಬೇಕು ಎಂದರು. ಶಾಲೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಶೇಷಗಿರಿ ಗೋಟ ಮಾತನಾಡಿ, ಶಾಲೆಯ ಅಭಿವೃದ್ಧಿಗಾಗಿ ಹಿತ ರಕ್ಷಣಾ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡುವುದರ ಮೂಲಕ ಶಾಲೆಗೆ ಅಗತ್ಯವಾದ ಸೌಲಭ್ಯಗಳನ್ನು ದಾನಿಗಳ ಮೂಲಕ ಪಡೆದು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕು ಎಂದರು. ಇದೇ ಸಂದರ್ಭ ಗೀತಾ ಎಚ್ ಎಸ್ ಎನ್ ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ್ ವರನ್ನು ಸನ್ಮಾನಿಸಲಾಯಿತು.
ಶಾಲಾ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಶೇಖರ ಚಾತ್ರಭೆಟ್ಟು, ಖಜಾಂಚಿ ಬಾಬಣ್ಣ ಪೂಜಾರಿ, ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ನಾಯ್ಕ್, ಗೀತಾ ಎಚ್ ಎಸ್ ಎನ್ ಫೌಂಡೇಶನ್ ನ ಗೌರವ ಸಲಹೆಗಾರ ಪ್ರಭಾಕರ ಐತಾಳ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಣೇಶ್ ಶಾಲೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ವಿನೋದ ಎಂ ಸ್ವಾಗತಿಸಿ ಪ್ರಾಸ್ತಾವಿಸಿದರು. ಶಿಕ್ಷಕ ನಟರಾಜ್ ವಂದಿಸಿದರು. ಶಿಕ್ಷಕ ಡಾ ಸದಾನಂದ ಬೈಂದೂರು ನಿರೂಪಿಸಿದರು.
