ಬೈಂದೂರು: ಕೊನೆಗೂ ಬಂದ ಉಸ್ತುವಾರಿ ಸಚಿವೆ! ಹಾನಿಗೀಡಾದ ಪ್ರದೇಶಗಳಿಗೆ ಭೇಟಿ – ಪರಿಹಾರದ ಭರವಸೆ
ಬೈಂದೂರು: ಕಳೆದ 15 ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆ ಹಾಗೂ ಬಿರುಗಾಳಿಗೆ ಹಾನಿಗಳಾದ ಪ್ರದೇಶಗಳಿಗೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ್ದಾರೆ.

ಬೈಂದೂರಿನ ಪಡುವರಿ ಸೋಮೇಶ್ವರ ಎಂಬಲ್ಲಿ ಗುಡ್ಡ ಕುಸಿತದಿಂದಾದ ಹಾನಿಯನ್ನು ವೀಕ್ಷಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಳಿಕ ಒತ್ತಿನೆಣೆ ಪ್ರದೇಶವನ್ನು ವೀಕ್ಷಿಸಿದರು. ನಂತರ ನೆರೆಯಿಂದ ಆವೃತವಾಗಿದ್ದ ನಾವುಂದದ ಸಾಲ್ಬುಡ ಕೋಣ್ಕಿ ಮುಂತಾದ ಪ್ರದೇಶಗಳನ್ನು, ಸಮುದ್ರ ತೀರದ ಕಡಲ್ಕೊರೆತವನ್ನು ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಜಿಲ್ಲೆಯಲ್ಲಿ ಆಗಿರುವ ಹಾನಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕ್ರೂಢೀಕರಿಸಿದ ಬಳಿಕ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಪರಿಹಾರ ವಿತರಿಸಲಾಗುವುದು ಎಂದರು. ಅತಿವೃಷ್ಟಿಯಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಪ್ರಮುಖ ಆದ್ಯತೆಯಾಗಿ ರಸ್ತೆ ದುರಸ್ತಿ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದರು. ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಮಾಜೀ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಬಾಬು ಶೆಟ್ಟಿ, ರಾಜು ಪೂಜಾರಿ, ಕಾಲ್ತೋಡು ವಿಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
