ಬೈಂದೂರು: ಪ್ರವಾಸೋದ್ಯಮ ಇಲಾಖೆಗೆ ಮೀಸಲಿಟ್ಟ ಭೂಮಿ ಅಕ್ರಮ ವರ್ಗಾವಣೆ, ಕಳಪೆ ಕಾಮಗಾರಿಗಳ ತನಿಖೆಯಾಗಲಿ – ಗೋಪಾಲ ಪೂಜಾರಿ

ಬೈಂದೂರು: ಒತ್ತಿನೆಣೆ ಭೂಕುಸಿತ ತಡೆಯುವಲ್ಲಿ ಶಾಶ್ವತ ಕಾಮಗಾರಿ ನಡೆಸುವಂತೆ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ. ಪಡುವರಿ ಎಂಬಲ್ಲಿ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನಡೆದ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಇಲ್ಲಿ ನಡೆದಿದರುವ ಕಳಪೆ ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕಿದೆ ಎಂದರು.
ಬೈಂದೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದಾಗಿಯೇ ಈ ವರ್ಷದ ಮಳೆಗೆ ಭೂ ಕುಸಿತವುಂಟಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನಡೆದ ಕಳಪೆ ಕಾಮಗಾರಿಗಳ ತನಿಖೆಯಾಗಬೇಕು ಎಂದು ಗೋಪಾಲ ಪೂಜಾರಿ ಹೇಳಿದರು.
ಪ್ರವಾಸೋದ್ಯಮ ಇಲಾಖೆಗೆ ಕಾದಿರಿಸಲಾದ 1.06 ಸೆಂಟ್ಸ್ ಜಾಗವನ್ನು ಬೇನಾಮಿ ವ್ಯಕ್ತಿಯೊಬ್ಬರಿಗೆ ವರ್ಗಾಯಿಸಲಾಗಿದ್ದು, ಮೇಲ್ನೋಟಕ್ಕೆ ಪ್ರವಾಸೋದ್ಯಮ ಇಲಾಖೆ ಯಾವುದೋ ಸ್ಕ್ಯಾಮ್ ನಡೆಸಲು ಯತ್ನಿಸಿರುವ ಶಂಕೆ ಎದುರಾಗಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಉನ್ನತ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೊಲ್ಲೂರಿನಲ್ಲಿ ಮನೆ ಮೇಲೆ ಗುಡ್ಡ ಕುಸಿತದಿಂದ ಸಾವನ್ನಪ್ಪಿರುವ ಮಹಿಳೆಗೆ ಪರಿಹಾರ ನೀಡಲಾಗುತ್ತದೆ. ಅದೇ ರೀತಿ, ಭೀಕರ ಗಾಳಿ ಮಳೆಗೆ ಹಾನಿಗೀಡಾದ ಅಡಿಕೆ ತೋಟ ಮತ್ತು ಭತ್ತದ ಕೃಷಿಕರಿಗೆ ಪರಿಹಾರ ನೀಡಬೇಕು. ಭತ್ತದ ಶಿ ಸಂಪೂರ್ಣ ಹಾಳಾಗಿದ್ದು, ಸರ್ಕಾರ ರೈತರಿಗೆ ಬಿತ್ತನೆ ಬೀಜ ಒದಗಿಸುವ ಕೆಲಸ ಮಾಡಬೇಕು. ಜಿಲ್ಲಾಧಿಕಾರಿಗಳ ಫ್ಲಡ್ ನಿಧಿಯಲ್ಲಿರುವ ಹಣವನ್ನು ಬಳಕೆ ಮಾಡುವುದರ ಜೊತೆಗೆ ಸರ್ಕಾರವೂ ಅತಿವೃಷ್ಟಿಯಿಂದ ತೊಂದರೆಗೊಳಗಾದ ರೈತರಿಗೆ, ಕೃಷಿಕರಿಗೆ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
