ಬೈಂದೂರು: ಅಧಿಕಾರಿಗಳು ಬಿಜೆಪಿಯ ಕಾರ್ಯಕರ್ತರೇ? – ಶಾಸಕ ಗಂಟಿಹೊಳೆಗೆ ಗೋಪಾಲ ಪೂಜಾರಿ ತರಾಟೆ
ಬೈಂದೂರು: ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿಕೆಗೆ ಮಾಜಿ ಶಾಸಕ ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ.
ಬೈಂದೂರಿನ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗುರುರಾಜ್ ಗಂಟಿಹೊಳೆ ಶಾಸಕರ ಅಧಿಕೃತ ಕಚೇರಿಯಲ್ಲಿ ಕುಳಿತುಕೊಳ್ಳದೆ ಪಕ್ಷದ ಕಚೇರಿಯನ್ನೇ ಶಾಸಕರ ಕಚೇರಿಯನ್ನಾಗಿ ಮಾಡಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಹಾಗಿದ್ದರೆ ಸರ್ಕಾರೀ ಅಧಿಕಾರಿಗಳು ಬಿಜೆಪಿಯ ಕಾರ್ಯಕರ್ತರೇ? ಎಂದು ಪ್ರಶ್ನಿಸಿದ್ದಾರೆ. ಗೋಪಾಲ ಪೂಜಾರಿ ಅಭಿವೃದ್ಧಿಗೆ ತಡೆಯುಂಟುಮಾಡುತ್ತಿದ್ದಾರೆ ಎನ್ನುವುದು ತಮ್ಮ ಪ್ರಚಾರಕ್ಕಾಗಿ ಮಾಡಿಕೊಂಡಿರುವ ಆರೋಪ ಅಷ್ಟೇ ಎಂದು ಹೇಳಿರುವ ಗೋಪಾಲ ಪೂಜಾರಿ, ನಾನು ಇದುವರೆಗೆ ಲಕ್ಷ್ಮೀನಾರಾಯಣ ಹಾಗೂ ಸುಕುಮಾರ ಶೆಟ್ಟಿ ಶಾಸಕರಾಗಿದ್ದಾಗ ಯಾವುದೇ ತಡೆಯುಂಟು ಮಾಡಿಲ್ಲ. ಶಾಸಕರಾಗಿ ಅನುದಾನಗಳನ್ನು ತರಿಸಿಕೊಳ್ಳುವುದು ಅವರ ಕರ್ತವ್ಯ. ಅದನ್ನು ಅವರು ಮಾಡಬೇಕು. ಅದು ಬಿಟ್ಟು ಮಾಜಿ ಶಾಸಕ ಆಗಿರುವ ನಾನು ತಡೆಯುಂಟು ಮಾಡುತ್ತಿದ್ದೇನೆ ಎನ್ನುವ ಹೇಳಿಕೆ ಸರಿಯಲ್ಲ. ಇನ್ನಾದರೂ ಬೇರೆಯವರ ಮೇಲೆ ಗೂಬೆಕೂರಿಸುವುದನ್ನು ನಿಲ್ಲಿಸಿ ಅಭಿವೃದ್ಧಿ ಕಾರ್ಯದತ್ತ ಗಮನ ಕೊಡಲಿ. ಅವರ ಪ್ರಯತ್ನಕ್ಕೆ ನಾನೂ ಬೆಂಬಲಿಸುತ್ತೇನೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅಕ್ರಮ ಸಕ್ರಮ ಸಭೆಗಳನ್ನು ಕರೆದಿದ್ದೀರಿ ಎಂದು ಪ್ರಶ್ನಿಸಿದ ಗೋಪಾಲ್ ಪೂಜಾರಿ, ನಮ್ಮ ಅವಧಿಯಲ್ಲಿ ಈಗಾಗಲೇ ಎರಡು ಸಿಟ್ಟಿಂಗ್ ನಡೆದಿದೆ. ಆದಷ್ಟು ಬೇಗ ಅರ್ಜಿಗಳನ್ನು ವಿಲೇವಾರಿ ಮಾಡುವುದು ನಮ್ಮ ಉದ್ದೇಶ. ಬೈಂದೂರು ಪದವಿ ಕಾಲೇಜಿನ ಅಧ್ಯಕ್ಷರಾದ ಬಳಿಕ ಶಾಸಕರು ಕಾಲೇಜಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಗೋಪಾಲ್ ಪೂಜಾರಿ, ಮೊದಲು ಕಾಲೇಜಿನ ಅಭಿವೃದ್ಧಿಯತ್ತ ಗಮನ ಕೊಡಲಿ ಮಕ್ಕಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವುದನ್ನು ಮನಗಂಡು ಕಾಲೇಜಿನ ಉನ್ನತಿಗೆ ಶ್ರಮಿಸಲಿ ಎಂದು ಹೇಳಿದರು.
ಈ ಸಂದರ್ಭ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಮುಖಂಡರುಗಳಾದ ರಮೇಶ್ ಗಾಣಿಗ, ರಾಜು ಪೂಜಾರಿ, ಮದನ್ ಕುಮಾರ್, ಪ್ರಕಾಶ್ಚಂದ್ರ ಶೆಟ್ಟಿ, ವಿಜಯ್ ಶೆಟ್ಟಿ ಕಾಲ್ತೋಡು, ಸದಾಶಿವ ಪಡುವರಿ, ಬಾಬು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
