ಬೆಂಗಳೂರು: ಕಾಲುಸಂಕ ನಿರ್ಮಾಣ, ವಾರಾಹಿ ಕಾಲುವೆ ದುರಸ್ತಿ – ಶಾಸಕರ ಬೇಡಿಕೆಗೆ ಸರ್ಕಾರದ ಸ್ಪಂದನೆ
ಬೆಂಗಳೂರು: ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಗೊಂಡ ಕಾಲುಸಂಕ ಕಾಮಗಾರಿಗಳನ್ನು ಮುಂದುವರಿಸುವ ಬಗ್ಗೆ ಹಾಗೂ ಜಲ ಸಂಪನ್ಮೂಲ ಇಲಾಖೆಯ 2022 -23ರಲ್ಲಿ ಅನುಮೋದನೆಗೊಂಡು ತಡೆ ಹಿಡಿಯಲಾದ ವಾರಾಹಿ ಕಾಲುವೆ ದುರಸ್ಥಿ ಕಾಮಗಾರಿ ನಡೆಸಲು ಅನುಮತಿಯನ್ನು ಪರಿಶೀಲಿಸಲಾಗಿವುದು ಎನ್ನುವ ಮೂಲಕ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಶ್ನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.


ಶಾಸಕ ಗುರುರಾಜ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯಿಂದ 2022-23 ನೇ ಸಾಲಿನಲ್ಲಿ ಉಡುಪಿ ಜಿಲ್ಲೆ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಜಿಲ್ಲಾ ರಸ್ತೆ, ಸೇತುವೆಗಳು – ಬಂಡವಾಳ ವೆಚ್ಚದಡಿ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ಹ್ಯಾಮ್ಲೆಟ್ ಗಳಿಗೆ ಸಂಪರ್ಕ ಯೋಜನೆಯಡಿ 7 ಪ್ಯಾಕೇಜ್ ಗಳಲ್ಲಿ ಒಟ್ಟು 23 ಕಾಲುಸಂಕ ನಿರ್ಮಾಣ ಕಾಮಗಾರಿಗೆ 5 ಕೋಟಿ ರೂ.ಗಳಿಗೆ ಅನುಮೋದನೆ ಗೊಂಡಿದೆ. ಆ ಪೈಕಿ 20 ಲಕ್ಷ ಮೊತ್ತದ ಒಂದು ಕಾಮಗಾರಿ ಪೂರ್ಣಗೊಂಡಿದ್ದು. ಉಳಿದಂತೆ 480 ಲಕ್ಷಗಳ 6 ಪ್ಯಾಕೇಜ್ ಕಾಮಗಾರಿಗಳು ಪ್ರಾರಂಭವಾಗದಿರುವ ಕಾಮಗಾರಿಗಳಾಗಿದ್ದು, ಆರ್ಥಿಕ ಇಲಾಖೆ ತಡೆ ಹಿಡಿದಿದೆ. ಪ್ರಸಕ್ತ ಸಾಲಿನಲ್ಲಿ ಲೆಕ್ಕ ಶೀರ್ಷಿಕೆಯಡಿ ಹಂಚಿಕೆಯಾದ ಅನುದಾನದಲ್ಲಿ ಮುಂದುವರೆದ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಿಕೊಂಡು ಬಾಕಿ ಉಳಿಯುವ ಅನುದಾನದಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪರಿಶೀಲಿಸಲಾಗುವುದು ಎಂದರು.



ವಾರಾಹಿ ಕಾಲುವೆ ದುರಸ್ತಿ ಕಾಮಗಾರಿಗಳು ಹಾಗೂ ವೈಯುಕ್ತಿಕ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುವ ಸಂಬಂಧ ಪರಿಶೀಲನೆ ಹಂತದಲ್ಲಿವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. 2022-23 ನೇ ಸಾಲಿನಲ್ಲಿ ಅನುಮೋದನೆಗೊಂಡು ಸರ್ಕಾರದ ಸುತ್ತೋಲೆಯನ್ವಯ ತಡೆ ಹಿಡಿಯಲಾದ ವಾರಾಹಿ ಕಾಲುವೆಯ ದುರಸ್ಥಿ ಕಾಮಗಾರಿ ಅಗತ್ಯತೆ ಹಾಗೂ ಅನುದಾನ ಲಭ್ಯತೆಯನ್ನು ಪರಿಗಣಿಸಿ ತಡೆ ಹಿಡಿದಿರುವ Non grounded ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಯನ್ನು ಪರಿಶೀಲಿಸಲಾಗುತ್ತಿದೆ. 2022-23 ನೇ ಸಾಲಿನಲ್ಲಿ ಎಸ್.ಸಿ. ಪಿ ಯೋಜನೆಯಡಿ ಹಂಚಿಕೆ ಯಾಗಿರುವ ರೂ. 1.5 ಕೋ.ರೂ.ಗಳಲ್ಲಿ ನೀರಾವರಿ ಸೌಲಭ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದಿದ್ದಾರೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.
