ಪುಣೆ: ಲೋನವಾಲಾ ಜಲಪಾತದಲ್ಲಿ ಕೊಚ್ಚಿಹೋದ ಪ್ರವಾಸಿಗರು : ಐವರು ನೀರು ಪಾಲು
ಮೂವರ ಮೃತದೇಹ ಪತ್ತೆ- ಇಬ್ಬರಿಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ
ಪುಣೆ: ಅಣೆಕಟ್ಟಿನ ಹಿನ್ನೀರಿನ ಬಳಿ ಇರುವ ಲೋನಾವಾಲಾ ಜಲಪಾತದ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ಒಂದೇ ಕುಟುಂಬದ ಐವರು ಸದಸ್ಯರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಮಹಾರಾಷ್ಟ್ರದ ಲೋನಾವಾಲಾದ ಭೂಷಿ ಅಣೆಕಟ್ಟೆಯಲ್ಲಿ ರವಿವಾರ ನಡೆದಿದೆ.

ಘಟನೆಯಲ್ಲಿ ಸಾವನ್ನಪ್ಪಿದವರನ್ನು ಶೈಸ್ತಾ ಲಿಯಾಕತ್ ಅನ್ಸಾರಿ (36), ಅಮಿಮಾ ಆದಿಲ್ ಅನ್ಸಾರಿ (13), ಮತ್ತು ಉಮ್ರಾ ಅಲಿಯಾ ಸಲ್ಮಾನ್ ಆದಿಲ್ ಅನ್ಸಾರಿ (8) ಎಂದು ಗುರುತಿಸಲಾಗಿದೆ. ಅದ್ನಾನ್ ಶಬತ್ ಅನ್ಸಾರಿ (4) ಮತ್ತು ಮರಿಯಾ ಅನ್ಸಾರಿ (9) ಅವರು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು, ನೀರಿನಲ್ಲಿ ಕೊಚ್ಚಿ ಹೋಗಿರುವವರನ್ನು ಪತ್ತೆ ಹಚ್ಚಲು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.

ವನೋವ್ರಿ ಬಳಿಯ ಸೈಯದ್ ನಗರದ ನಿವಾಸಿಗಳಾದ ಅನ್ಸಾರಿ ಕುಟುಂಬದ 17-18 ಜನರು ಜಲಪಾತಕ್ಕೆ ಭೇಟಿ ನೀಡಿದ್ದು, ಮಳೆಗಾಲವನ್ನು ಆನಂದಿಸಲು ಭೂಷಿ ಅಣೆಕಟ್ಟೆಯ ಹಿಂಭಾಗದಲ್ಲಿರುವ ಜಲಪಾತದ ಬಳಿ ತೆರಳಿದ್ದಾಗ ಈ ಘಟನೆ ನಡೆದಿದೆ. ಅವರೆಲ್ಲ ರೈಲ್ವೆ ಜಲಪಾತ ಎಂದೇ ಸ್ಥಳೀಯವಾಗಿ ಹೆಸರಾಗಿರುವ ಜಲಪಾತದಲ್ಲಿ ಜಲಕ್ರೀಡೆಯಲ್ಲಿ ತೊಡಗಿದ್ದರು. ಈ ನಡುವೆ ಭೂಷಿ ಅಣೆಕಟ್ಟೆಗೆ ಹರಿಯುವ ಜಲಪಾತದ ತೀವ್ರತೆ ಹೆಚ್ಚಾಗಿದೆ. ಈ ಸಂದರ್ಭ ಒಂದೇ ಕುಟುಂಬದ 10ಜನರ ತಂಡ ಹೊಳೆಯ ಮಧ್ಯದಲ್ಲಿತ್ತು. ಏಕಾಏಕೀ ನೀರು ಹೆಚ್ಚಾಗಿ ಹರಿಯಲಾರಂಭಿಸಿದೆ. ನೀರಿನ ಸೆಳೆತಕ್ಕೆ ಸಿಲುಕಿದ ಹತ್ತು ಜನರ ತಂಡ ದಿಢೀರನೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಆ ಪೈಕಿ ಐವರು ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮುಂಗಾರಿನ ಸಂದರ್ಭದಲ್ಲಿ ಈ ಜಲಪಾತ ಹಾಗೂ ಭೂಷಿ ಅಣೆಕಟ್ಟು ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಎಚ್ಚರಿಕೆಯಿಂದ ಇರುವಂತೆ ಹಾಗೂ ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸ್ಥಳೀಯ ಪ್ರಾಧಿಕಾರಗಳು ಮುನ್ನೆಚ್ಚರಿಕೆ ನೀಡುತ್ತಲೇ ಬಂದಿವೆ. ಆದರೂ ಪ್ರವಾಸಿಗರು ಮಾತ್ರ ಎಚ್ಚರಿಕೆ ನಿರ್ಲಕ್ಷ್ಯಿಸಿ ನೀರಿಗಿಳಿಯುತ್ತಿರುವುದು ಆತಂಕ ಸೃಷ್ಟಿಸಿದೆ.
