ಮಹಿಳಾ ವೈದ್ಯೆಗೆ ಕಿರುಕುಳ: ಆರೋಪಿ ರಾಬರ್ಟ್ ನನ್ನು ಕರ್ತವ್ಯದಿಂದ ಬಿಡುಗಡೆ

ಉಡುಪಿ ಜಿಲ್ಲಾಧಿಕಾರಿಯಿಂದ ಜಾಣ ನಡೆ
ಕುಂದಾಪುರ: ಇಲ್ಲಿನ ಸರ್ಕಾರೀ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆಯೆನ್ನಲಾದ ವಿವಾಹಿತ ಮಹಿಳಾ ವೈದ್ಯಾಧಿಕಾರಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿಯವರು ಆರೋಪಿ ರಾಬರ್ಟ್ ರೆಬೆಲ್ಲೋ ಅವರನ್ನು ಕರ್ತವ್ಯವಿಂದ ಬಿಡುಗಡೆಗೊಳಿಸಿ ಆದೇಶ ನೀಡುವ ಮೂಲಕ ಜಾಣ ನಡೆ ಪ್ರದರ್ಶಿಸಿದ್ದಾರೆ.!
ಈ ಕುರಿತಾಗಿ, ಆದೇಶ ನೀಡಿರುವ ಡಿಸಿ ವಿದ್ಯಾಕುಮಾರಿ ಅವರು, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯ ಬಳಿಕ ಈ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ. ಆರೋಪಿ ರಾಬರ್ಟ್ ರೆಬೆಲ್ಲೋ ಅದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಈ ಪ್ರಕರಣದ ಸುಗಮ ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿರುವುದರಿಂದ ಡಾ| ರಾಬರ್ಟ್ ರೆಬೆಲ್ಲೋ ಆಡಳಿತ ವೈದ್ಯಾಧಿಕಾರಿ ಉಪವಿಭಾಗೀಯ ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆಯುಕ್ತರು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯಕ್ತಾಲಯ ಬೆಂಗಳೂರು ಇವರಿಗೆ ವರದಿ ಮಾಡಿಕೊಳ್ಳುವಂತೆ ಆದೇಶಿಸಿದ್ದಾರೆ. ಅಲ್ಲದೇ ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಕುಷ್ಟ ರೋಗ ನಿರ್ವಹಣಾಧಿಕಾರಿ ಡಾ. ಲತಾ ನಾಯಕ್ ಅವರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರದ ಆಡಳಿತಾಧಿಕಾರಿ ಹುದ್ದೆಗೆ ವರ್ಗಾಯಿಸಿ ಆದೇಶ ನೀಡಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗುತ್ತಿದ್ದಂತೆ ಸಾರ್ವಜನಿಕರು ಆಡಳಿತ ವೈದ್ಯಾಧಿಕಾರಿ ರಾಬರ್ಟ್ ವಿರುದ್ಧ ತಿರುಗಿಬಿದ್ದಿದ್ದಾರೆ. ಆರೋಪಿಯನ್ನು ತಕ್ಷಣ ಅಮಾನತುಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಆದರೆ ಉಡುಪಿ ಜಿಲ್ಲಾಧಿಕಾರಿಗಳು ಮಾತ್ರ ನೇರವಾಗಿ ಅಮಾನತು ಮಾಡದೇ ಬೆಂಗಳೂರಿನ ಆರೋಗ್ಯ ಆಯುಕ್ತರ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿರುವುದೂ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದರ ಬೆನ್ನಿಗೇ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಎಡವಟ್ಟಾಗಿರುವುದು ಬೆಳಕಿಗೆ ಬಂದಿದೆ. ಯಾವುದೇ ಜಿಲ್ಲಾಧಿಕಾರಿಗಳಿಗೆ ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರೂಪ್ ಎ ಮತ್ತು ಗ್ರೂಫ್ ಬಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಅಧಿಕಾರ ಇಲ್ಲ. ಆದರೆ ಉಡುಪಿ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಡಾ. ಲತಾ ನಾಯಕ್ ಅವರನ್ನು ವರ್ಗಾಯಿಸಿ ಆದೇಶ ನೀಡಿರುವುದು ಗ್ರೂಪ್ ಎ ಅಧಿಕಾರಿಗಳಿಗೆ ಗೊಂದಲ ಮೂಡುವಂತಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು ಮತ್ತೊಂದು ಸುತ್ತೋಲೆ ಹೊರಡಿಸಿ ಡಾ. ಲತಾ ಅವರನ್ನು ನಿಯೋಜಿಸಿರುವುದಾಗಿ ಆದೇಶ ನೀಡಿದ್ದಾರೆ.

ಆದರೆ ಲೈಂಗಿಕ ದೌರ್ಜನ್ಯದ ಆರೋಪಿ ಡಾ. ರಾಬರ್ಟ್ ಅವರನ್ನು ಅಮಾನತು ಮಾಡದೇ ಕರ್ತವ್ಯದಿಂದ ತೆರವುಗೊಳಿಸುವ ಗಡಿಬಿಡಿಯಲ್ಲಿ ಈ ದೋಷ ನಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಈ ಹಿಂದಿನಿಂದಲೂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದವು. ಇದರಲ್ಲಿ ಆಸ್ಪತ್ರೆಯ ಒಳಗಿನ ಸಿಬ್ಬಂದಿಗಳೂ ಸೇರಿದಂತೆ ಸಾರ್ವಜನಿಕರಿಂದಲೂ ಹಲವು ದೂರುಗಳು ಬಂದಿದ್ದವು. ಆದರೆ ಇದ್ಯಾವುದ್ಕಕೂ ಜಿಲ್ಲಾಡಳಿತ ಕ್ರಮ ಕೈಗೊಂಡಿರಲಿಲ್ಲ. ಆಸ್ಪತ್ರೆಯ ನಿರ್ವಹಣೆಯ ವಿಚಾರದಲ್ಲಿಯೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದ್ದವು.