ಹಳೆಯ ಚಾಸ್ಸೀಗಳಿಂದ ಹೊಸ ಸೇತುವೆ : ರಾಂಪಯ್ಯನ ಜೆಡ್ಡುವಿನಲ್ಲಿ ಸಾಕಾರಗೊಂಡ ಚಾಸ್ಸೀ ಸೇತುವೆ!
ಶಾಸಕ ಗಂಟಿಹೊಳೆ ಕನಸಿಗೆ ವ್ಯಾಪಕ ಶ್ಲಾಘನೆ
ಸಮೃದ್ಧ ಬೈಂದೂರಿಗೆ ಅರುಣಾಚಲಂ ಟ್ರಸ್ಟ್ ಸಾಥ್
ವಿಶೇಷ ವರದಿ | ವಾಸ್ತವ.ಕಾಂ
ಕುಂದಾಪುರ: ಸಮೃದ್ಧ ಬೈಂದೂರು. ಇದು ಬೈಂದೂರು ಶಾಸಕ ಗಂಟಿಹೊಳೆಯವರ ಡ್ರೀಮ್. ಗ್ರಾಮೀಣ ಭಾಗವಾದ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕನಸು ಕಂಡಿರುವ ಗುರುರಾಜ್ ಗಂಟಿಹೊಳೆ ಸರ್ಕಾರದ ಹಾಗೂ ಸರ್ಕಾರೇತರ ಸಹಭಾಗಿತ್ವದಲ್ಲಿ ಊರಿನ ಅಭಿವೃದ್ಧಿ ಕನಸು ಕಂಡಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಈಗಲೂ ಸಾರಿಗೆ ಸಮಸ್ಯೆಗಳು ಹೊದ್ದು ಮಲಗಿವೆ. ಕಳೆದ ವರ್ಷವಷ್ಟೇ ಕಾಲುಸಂಕದಲ್ಲಿ ಜಾರಿಬಿದ್ದ ಪುಟ್ಟ ಬಾಲಕಿ ಸಾವನ್ನಪ್ಪಿದ ಕರುಣಾಜನಕ ಕಥೆ ಕಣ್ಣೆದುರಿಗೆ ಇದೆ. ಗ್ರಾಮಿಣ ಭಾಗಗಳಲ್ಲಿ ರಸ್ತೆ ಹಾಗೂ ಸೇತುವೆ ಸಮಸ್ಯೆಗಳಿಗೆ ಸಂಪೂರ್ಣವಾಗಿ ಮುಕ್ತಿ ಪಡೆದುಕೊಳ್ಳಲಲು ಸಾಧ್ಯವಾಗಿಲ್ಲ. ಅದಕ್ಕಾಗಿಯೇ ಖಾಸಗೀ ಸಹಭಾಗಿತ್ವದಲ್ಲಿ ಚಾಸಿಸ್ ಸೇತುವೆಯ ಕನಸು ಕಂಡವರು ಶಾಸಕ ಗುರುರಾಜ್ ಗಂಟಿಹೊಳೆ.

ಒಂದು ಸರ್ವೇ ಪ್ರಕಾರ ಬೈಂದೂರು ಕ್ಷೇತ್ರದಲ್ಲಿ 50 ಕಾಲು ಸಂಕಗಳ ತುರ್ತು ಅಗತ್ಯ ಇದೆ. ಇಲ್ಲಿ ಕಾಲು ಸಂಕವಿಲ್ಲದೇ ಇದ್ದರೆ ವರ್ಷದ ಆರು ತಿಂಗಳು ಜೀವನನಡೆಸುವುದೇ ಕಷ್ಟ, ಆದ್ದರಿಂದ ಅಂತಹಾ ಪ್ರದೇಶಗಳಲ್ಲಿ ಸಮೃದ್ಧ ಬೈಂದೂರು ಟ್ರಸ್ಟ್ ಮತ್ತು ಬೆಂಗಳೂರು ಮೂಲದ ಅರುಣಾಚಲಂ ಟ್ರಸ್ಟ್ ಜೊತೆಗೆ ಕೈಜೋಡಿಸಿ ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸೇರಿ ಹಳೆಯ ಬಸ್ಸು ಹಾಗೂ ಲಾರಿಗಳ ಚಾಸಿಸ್ ಬಳಸಿ ಕಿರು ಸೇತುವೆ ನಿರ್ಮಿಸುವುದು ಈ ಯೋಜನೆಯ ಉದ್ದೇಶ ಎನ್ನುತ್ತಾರೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ.

ಇದೀಗ ಹೊಸಂಗಡಿ ಸಮೀಪದ ಯಡಮೊಗೆಯ ರಾಂಪಯ್ಯನಜೆಡ್ಡು ಸೇರಿದಂತೆ ವಂಡ್ಸೆ ಹಾಗೂ ತೊಂಬಟ್ಟು-ಕಬ್ಬಿನಾಲೆ ಎಂಬಲ್ಲಿ ಮೊದಲ ಪ್ರಾಯೋಗಿಕ ಕಾಲುಸಂಕ ನಿರ್ಮಾಣವಾಗುತ್ತಿದ್ದು ರಾಂಪಯ್ಯನಜೆಡ್ಡು ಕಿರು ಸೇತುವೆ ಅರ್ಧಕ್ಕಿಂತಲೂ ಹೆಚ್ಚು ಕಾಮಗಾರಿ ಮುಗಿದಿದೆ. ಆ ಮೂಲಕ ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಚಾಸಿಸ್ ಕಾಲುಸಂಕ ಎನ್ನುವ ಹೆಬ್ಬಳಿಕೆಗೆ ರಾಂಪಯ್ಯನಜೆಡ್ಡು ಚಾಸಿಸ್ ಸೇತುವೆ ಕಾರಣವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಯಡಮೊಗೆ ಗ್ರಾಮಪಂಚಾಯತ್ನ ರಾಂಪಯ್ಯನಜೆಡ್ಡು ತೀರಾ ಗ್ರಾಮೀಣ ಪ್ರದೇಶ. ಈ ಹಿಂದೆ ನಕ್ಸಲ್ ಪೀಡಿತ ಪ್ರದೆಶವಾಗಿದ್ದ ಯೆಡಮೊಗ್ಗೆ ಗ್ರಾಮ ಪಂಚಾಯತ್ ಗೆ ನಕ್ಸಲ್ ಪ್ಯಾಕೇಜ್ ಹರಿದುಬಂದಿದ್ದರೂ ಅದೂ ಗ್ರಾಮೀಣ ಜನರಿಗೆ ಪ್ರಯೋಜನವಾಗಿರಲಿಲ್ಲ ಎನ್ನುವುದೂ ಸತ್ಯ. ಈ ಪ್ರದೆಶಕ್ಕೆ ಯಡಮೊಗ್ಗೆಯ ಕುಮ್ಟಿಬೇರಿನಿಂದ ಬರಬೇಕು. ಆದರೆ ಹಾಗೇ ಬರಲು ಒಂದು ಹೊಳೆ ಅಡ್ಡವಿದೆ. ಇದುವರೆಗೂ ಇಲ್ಲಿನ ಜನ ತಾವೇ ಮರದ ಅಪಾಯಕಾರಿ ಕಾಲುಸಂಕ ನಿರ್ಮಿಸಿಕೊಂಡು ಸಂಚರಿಸುತ್ತಿದ್ದರು. ಅನಾರೋಗ್ಯ ಪೀಡಿತರು, ಶಾಲೆಗೆ ಹೋಗುವ ಮಕ್ಕಳಿಗೆ ಇದೊಂದು ಜೀವದ ಹಂಗು ತೊರೆದು ಬದುಕುವ ಅನಿವಾರ್ಯ ಸ್ಥಿತಿ.
ರಾಂಪಯ್ಯನಜೆಡ್ಡುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಿರು ಸೇತುವೆ ಅರ್ಧಕ್ಕಿಂತಲೂ ಹೆಚ್ಚು ಕಾಮಗಾರಿ ಮುಗಿದಿದೆ. ಮೂರು ಫಿಲ್ಲರ್ಗಳ ಮೇಲೆ ಹಳೆಯ ಘನ ವಾಹನಗಳ ಚಾಸಿಸ್ ಗಳನ್ನು ಜೋಡಿಸಿ ಅಳವಡಿಸಲಾಗಿದೆ. 65 ಅಡಿಗಿಂತಲೂ ಹೆಚ್ಚು ಉದ್ದವಿರುವ ಈ ಕಿರುಸೇತುವೆ, 20 ಅಡಿ ಎತ್ತರವಿದ್ದು ಏಕಕಾಲಕ್ಕೆ 800 ಕೆಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ. ಆಟೋ ರಿಕ್ಷಾ ಹಾಗೂ ಸಣ್ಣ ಕಾರುಗಳು ಸಂಚರಿಸಬಹುದಾದ ಈ ಸೇತುವೆಗೆ ಎರಡೂ ಬದಿಗಳಲ್ಲಿ ಹಿಡಿಕೆ, ಚಾಸಿಸ್ ಮೇಲೆ ಹಲಗೆ ಅಥವಾ ಪ್ಲೇಟ್ಗಳನ್ನು ಇನ್ನಷ್ಟೇ ಅಳವಡಿಸಬೇಕಿದೆ. ನಿರೀಕ್ಷೆಯಂತೆ ಕಾಮಗಾರಿ ನಡೆದರೆ ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎನ್ನಲಾಗುತ್ತಿದೆ. ಆದಷ್ಟು ಬೇಗ ಜನ ಸಂಚಾರಕ್ಕೆ ಅವಕಾಶವಾಗಲಿ ಎಂದು ವಾಸ್ತವ.ಕಾಂ ಟೀಂ ಹಾರೈಸುತ್ತದೆ..