ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ವಕೀಲ ಎಸ್.ಪಿ ದಿನೇಶ್ ಪತ್ರಿಕಾಗೋಷ್ಠಿ
ಕುಂದಾಪುರ: ಕಳೆದ ಎರಡು ಅವಧಿಯಲ್ಲಿ ಸ್ಪರ್ಧಿಸಿ ಸಣ್ಣ ಅಂತರದಿಂದ ಸೋತಿದ್ದೇನೆ. ಆದರೆ ಈ ಬಾರಿ ಗೆಲುವು ನನ್ನದೇ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಹೇಳಿದರು.
ಅವರು ಕುಂದಾಪುರದಲ್ಲಿ ಗುರವಾರ ಸುದ್ಧಿಗಾರರೊಂದಿಗೆ ಮಾತನಾಡುತ್ತಿದ್ದರು. ನನಗೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಪಕ್ಷಾಂತರಿಗಳಿಗೆ ಮಣೆ ಹಾಕಿದ್ದಾರೆ. ಸಂವಿಧಾನದ 4 ಮನೆ, 4 ಪಕ್ಷವನ್ನು ನೋಡಿರುವ ವ್ಯಕ್ತಿಗೆ ಈಗ ಪಕ್ಷ ಟಿಕೇಟು ನೀಡಿದೆ. ರಾಹುಲ್ ಗಾಂಧಿ, ಸಿದ್ಧರಾಮಯ್ಯರಿಗೆ ನಿಂದಿಸಿದ ವ್ಯಕ್ತಿ ಕಾಂಗ್ರಸ್ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಮುಜುಗರವಾಗುತ್ತದೆ ಎಂದರು. ಈ ಸ್ಪರ್ಧೆ ಮಾಡುತ್ತಿರುವ ಮೂರು ವ್ಯಕ್ತಿಗಳು ಕೂಡಾ ಮೂರು ಜನ ಕೂಡಾ ಒಂದೇ ಮನೆಯಿಂದ ಬಂದವರು. ನಾನು ಮಾತ್ರ ಗಾಂಧಿ ಸಂಸ್ಕೃತಿಯಿಂದ ಬಂದವನು. ಹಾಗಾಗಿ ನನ್ನ ಸ್ಪರ್ಧೆ ಪಕ್ಷದ ನಾಯಕರ ವಿರುದ್ಧವಲ್ಲ, ಬದಲಾಗಿ ಪಕ್ಷಾಂತರಿಯ ವಿರುದ್ಧ ಎಂದರು.
ನೈರುತ್ಯ ಪದವೀಧರ ಕ್ಷೇತ್ರವು 30 ವಿಧಾನಸಭಾ ಕ್ಷೇತ್ರ, 6 ಲೋಕಸಭಾ ಕ್ಷೇತ್ರ, 6 ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ಎರಡು ಚುನಾವಣೆಯಲ್ಲಿ ಸ್ಫರ್ಧೆ ಮಾಡಿದ್ದು ಕ್ಷೇತ್ರದ ಮತದಾರರ ಪರಿಚಯ ಹೊಂದಿದ್ದೇನೆ. ಇದು ನನ್ನ ಮೂರನೇ ಅವಧಿಯ ಸ್ಪರ್ಧೆಯಾಗಿದ್ದು, ಈ ಬಾರಿ ಗೆಲುವು ನನ್ನದೇ ಎಂದ ಅವರು, ಜೂನ್ 3 ರಂದು ನಡೆಯುವ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಪದ್ದತಿ ಇರುವುದರಿಂದ ಮತ ಹಾಕುವಾಗ ಮತಗಟ್ಟೆಯಲ್ಲಿ ಚುನಾವಣಾಧಿಕಾರಿಗಳು ನೀಡುವ ನೇರಳೆ ಬಣ್ಣದ ಪೆನ್ನಿನಿಂದಲೇ ಎಸ್.ಪಿ.ದಿನೇಶ್ ಹೆಸರಿನ ಮುಂದೆ ‘|’ ಎಂದು ಬರೆದು ಮತ ಚಲಾಯಿಸಬೇಕು. ಇಲ್ಲದೇ ಇದ್ದರೆ ಮತ ಅಸಿಂಧುವಾಗುತ್ತದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಕುಂದಾಪುರ ಬಾರ್ ಅಸೋಸಿಯೇಶನ್ ಗೆ ಭೇಟಿ ನೀಡೊ ವಕೀಲರ ಹಾಗೂ ಪದವೀಧರರ ಬೆಂಬಲ ಯಾಚಿಸಿದರು. ಈ ಸಂದರ್ಭ ಈಶ್ವರ, ಸಿದ್ಧು ಜೊತೆಗಿದ್ದರು.
ಯಾರೀ ದಿನೇಶ್:
2012 ಮತ್ತು 2018ರಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿರುವ ಎಸ್.ಪಿ ದಿನೇಶ್, ಶಿವಮೊಗ್ಗ ಜಿಲ್ಲೆಯ ಜಯದೇವ ಬಡಾವಣೆಯ ವಿನೋಬನಗರದವರು. ಬಿ.ಕಾಂ, ಎಲ್.ಎಲ್.ಬಿ ಮಾಡಿರುವ ದಿನೇಶ್, ವಕೀಲ ವೃತ್ತಿ ಮಾಡುತ್ತಾ ಸಾಕಣ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕಗಷದ ಸಕ್ರಿಯ ಕಾರ್ಯಕರ್ತರಾಗಿ ಹಲವು ದಶಕಗಳಿಂದ ಕೆಲಸಮಾಡುತ್ತಿದ್ದ ದಿನೇಶ್, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪದವೀಧರ ಮತದಾರರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಬಾರಿ ಕಾಂಗ್ರೆಸ್ ಏನಾದರೂ ದಿನೇಶ್ ಗೆ ಟಿಕೆಟ್ ನೀಡಿದ್ದರೆ ಅನಾಯಾಸವಾಗಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿತ್ತು ಎನ್ನುವ ಲೆಕ್ಕಾಚಾರ ರಾಜಕೀಯ ಪಡಸಾಲೆಯಿಂದ ಕೇಳಿ ಬಂದಿತ್ತು. ಆದರೆ ಇದೀಗ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ದಿನೇಶ್ ಪಕ್ಷೇತರವಾಗಿ ಸ್ಪರ್ಧಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.