ಬ್ರಹ್ಮಾವರ: ಬಾವಿ ಸ್ವಚ್ಛ ಮಾಡಲು ಇಳಿದ ಕಾರ್ಮಿಕ ಸಾವು, ಮತ್ತೊಬ್ಬ ಪಾರು

ಬ್ರಹ್ಮಾವರ: ಬಾವಿ ಸ್ವಚ್ಛ ಮಾಡಲು ಇಳಿದ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಸಾವನ್ನಪ್ಪಿದರೆ ಮತ್ತೊಬ್ಬನನ್ನು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ ಘಟನೆ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ಸಂಭವಿಸಿದೆ.
ಸ್ಥಳೀಯ ನಿವಾಸಿ ದುರ್ಗೇಶ್ (34) ಸಾವನ್ನಪ್ಪಿದವರು. ಅಡಿವೆಪ್ಪ ಕುರಿ (50) ರಕ್ಷಣೆಗೊಳಗಾದವರು. ಇಬ್ಬರೂ ಕೊಪ್ಪಳ ಜಿಲ್ಲೆಯವರಾಗಿದ್ದು, ಬ್ರಹ್ಮಾವರದ ಸಾಲಿಕೆರೆಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು.ಇವರಿಬ್ಬರು ಕೆಸರು ಇದೆ ಎಂದು ಬಾವಿಯೊಳಗೆ ಬೀಚಿಂಗ್ ಪೌಡರ್ಹಾಕಿ ಸ್ವಚ್ಛ ಮಾಡುತ್ತಿದ್ದರು. ಆಮ್ಲಜನಕ ಕೊರತೆ ಸಾವಿಗೆ ಕಾರಣ ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
