ಕುಂದಾಪುರ: ತನ್ನದೇ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿ- ಲಕ್ಷಾಂತರ ರೂ. ನಷ್ಟ

ಕುಂದಾಪುರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿಗೆ ಹೊಡೆದು ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಘಟನೆ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಎಂಬಲ್ಲಿ ನಡೆದಿದೆ.
ಶುಭಲತಾ ಅವರ ಗಂಡ ದಿನೇಶ ಎಂಬಾತ ರಾತ್ರಿ ವಿಪರೀತ ಕುಡಿದು ಮನೆಗೆ ಬಂದು ಗಲಾಟೆ ಎಬ್ಬಿಸಿ ಪತ್ನಿಗೆ ಹಲ್ಲೆನಡೆಸಿದ್ದಾನೆ. ಗಂಡನ ಕುಡಿತ ಹಾಗೂ ಹಲ್ಲೆಯಿಂದ ರೋಸಿ ಹೋದ ಪತ್ನಿ ಶುಭಲತಾ ತನ್ನ ತವರು ಮನೆ ಅಂಪಾರಿಗೆ ಹೋಗಿದ್ದರು. ಮರುದಿನ ಬೆಳಗ್ಗೆ ವಾಪಾಸ್ಸು ಮನೆಗೆ ಬಂದು ನೋಡುವಾಗ ಮನೆಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ.
ಗಂಡನ ಕೃತ್ಯದಿಂದ ಮನೆಯ ಹಿಂದಿನ ಭಾಗಕ್ಕೆ ಬೆಂಕಿ ತಗುಲಿ ಮರದ ಉಪಕರಣ ಹಾಗೂ ಅಡುಗೆ ಮಾಡುವ ಸಾಮಗ್ರಿಗಳು ಮತ್ತು ಬಟ್ಟೆಗಳು, ಅಡುಗೆ ಆಹಾರ ಪದಾರ್ಥಗಳು ಸುಟ್ಟು ಹೋಗಿದ್ದು, ಸುಮಾರು 3 ಲಕ್ಷ ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿದೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
