ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಐ.ಎಎಸ್ ಕನಸಿನ ಪ್ರತ್ವಿತಾ ಪಿ. ಶೆಟ್ಟಿಗೆ ಶಾಲಾಡಳಿತದಿಂದ ಸನ್ಮಾನ

ಕುಂದಾಪುರ: ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಹೋರ್ವರಮನೆ ಪ್ರಭಾಕರ ಶೆಟ್ಟಿ ಹಾಗೂ ಭಾಗ್ಯ ಶೆಟ್ಟಿ ದಂಪತಿಗಳ ಪುತ್ರಿ, ಎಕ್ಸ್ಲೆಂಟ್ ಮತ್ತು ಲಿಟ್ಲ್ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತ್ವಿತಾ ಪಿ ಶೆಟ್ಟಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದು ರಾಜ್ಯಕ್ಕೆ 5 ನೇ ರ್ಯಾಂಕ್ ಮತ್ತು ಕುಂದಾಪುರ ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.






ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಬಂದಿರುವ ಪ್ರತ್ವಿತಾ ಪಿ ಶೆಟ್ಟಿಗೆ ಇಂದು ಶಾಲೆಯಲ್ಲಿ ಶಿಕ್ಷಕ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಸನ್ಮಾನಿಸಿ, 10 ಸಾವಿರ ನಗದು ಬಹುಮಾನ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪತ್ವಿತಾ, ನನ್ನ ಶಿಕ್ಷಕರು ಸಂಜೆ 6 ರ ತನಕ ನಮ್ಮ ಜೊತೆ ನಿಂತು ನಿರಂತರ ತರಬೇತಿ ನೀಡಿದ್ದಾರೆ. ನನ್ನ ಹೆತ್ತವರು ನನಗೆ ಯಾವುದೇ ರೀತಿಯ ಒತ್ತಡವನ್ನು ನೀಡಿರಲಿಲ್ಲ ಆದರೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಪರೀಕ್ಷೆಯ ಸಂದರ್ಭ ಮಾತ್ರ ಹಾರ್ಡ್ ವರ್ಕ್ ಮಾಡಿದ್ದೇನೆ. ನನಗೆ ರ್ಯಾಂಕ್ ಬರುತ್ತೆ ಎನ್ನುವ ಭರವಸೆ ಇತ್ತು ಎಂದಿದ್ದಾರೆ. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಯ ಆಡಳಿತ ಮಂಡಳಿ, ಭೋದಕ, ಭೋದಕೇತರ ಸಿಬ್ಬಂದಿ ವರ್ಗ ಮತ್ತು ಪೋಷಕರಿಗೆ ಚಿರರುಣಿಯಾಗಿದ್ದೇನೆ. ಮುಂದೆ ಯು.ಪಿ.ಎಸ್.ಸಿ ಪರೀಕ್ಷೆ ಬರೆದು ಐ.ಏ.ಏಸ್ ಅಧಿಕಾರಿಯಾಗುವ ಆಸೆಯಿದೆ ಎಂದರು.
ಎಮ್.ಎಮ್.ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಮ್. ಮಹೇಶ ಹೆಗ್ಡೆ ಶುಭಹಾರೈಸಿದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕುಮಾರ್ , ಪ್ರತ್ವಿತಾಳ ತಾಯಿ ಭಾಗ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
