ಬೈಂದೂರು: ಶಿವಮೊಗ್ಗ ಲೋಕಸಭಾ ಚುನಾವಣೆ- ಬಿಜೆಪಿಯಿಂದ ಬಹಿರಂಗ ಪ್ರಚಾರ ಅಂತ್ಯ

ಬೈಂದೂರು: ದೇಶದ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಂಡಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರ ಬೈಂದೂರು ವಿಧಾನಸಭಾ ಕ್ಷೇತ್ರದ ಅಂತಿಮ ಕ್ಷಣದ ಚುನಾವಣಾ ಪ್ರಚಾರ ಉಪ್ಪುಂದದಲ್ಲಿ ನಡೆಯಿತು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮೊದಲಾದವರು ಭಾನುವಾರ ಕ್ಷೇತ್ರದಾದ್ಯಂತ ವಿವಿಧೆಡೆ ಪ್ರಚಾರ ನಡೆಸಿ, ಸಂಜೆ ಉಪ್ಪುಂದ ಪೇಟೆಯಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಳಿಸಿದರು.

ಸಂಜೆ ಮೂವರು ಶಾಸಕರು ಉಪ್ಪುಂದ ಪೇಟೆಯ ಮೀನು ಮಾರುಕಟ್ಟೆ, ಆಟೋ ನಿಲ್ದಾಣ ಸಹಿತವಾಗಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಶಿಲ್ಪಾ ಜಿ. ಸುವರ್ಣ, ಮಹೇಂದ್ರ ಪೂಜಾರಿ, ರಾಜೇಶ್ ಕಾವೇರಿ, ಸುರೇಶ್ ಶೆಟ್ಟಿ, ಜಗನ್ನಾಥ ಮೊಗವೀರ, ಕೃಷ್ಣಪ್ರಸಾದ್ ಅಡ್ಯಂತಾಯ, ಶರತ್ ಶೆಟ್ಟಿ, ಶ್ಯಾಮಲಾ ಕುಂದರ್, ಕ ಗಣೇಶ್ ಗಾಣಿಗ, ಅನಿತಾ ಶ್ರೀಧರ್ ಗಾಣಿಗ ಹಾಗೂ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

