ಈಶ್ವರಪ್ಪಗೆ ಬೈ ಬೈ ಹೇಳಿ ರಾಘವೇಂದ್ರಗೆ ಜೈ ಜೈ ಅಂದ ಶ್ರೀಧರ್ ಬಿಜೂರ್ ಟೀಂ!!?
ಈಶ್ವರಪ್ಪಗೆ ಬೈ ಬೈ ಹೇಳಿ ರಾಘವೇಂದ್ರಗೆ ಜೈ ಜೈ ಅಂದ ಶ್ರೀಧರ್ ಬಿಜೂರ್ ಟೀಂ

ಬೈಂದೂರು : ಪರಿವಾರ ಸಂಘಟನೆಯಲ್ಲಿ ಗುರುತಿಸಿಕೊಂಡು ಬಳಿಕ ಭಾರತೀಯ ಜನತಾ ಪಕ್ಷದ ಕೆಲವು ನಾಯಕರ ಪಟ್ಟಭದ್ರ ಹಿತಾಸಕ್ತಿಯಿಂದ ರೋಸಿ ಹೋಗಿ ಈಶ್ವರಪ್ಪನ ಕೈ ಹಿಡಿದಿದ್ದರೆನ್ನಲಾಗಿದ್ದ ಬೈಂದೂರಿನ ಹಿಂದೂ ಮುಖಂಡ ಶ್ರೀಧರ ಬಿಜೂರು ಹಾಗೂ ಅವರ ತಂಡ ರಾಷ್ಟ್ರಭಕ್ತರ ಬಳಗದಿಂದ ದೂರ ಸರಿಯುವ ಮೂಲಕ ಕೆ.ಎಸ್.ಈಶ್ವರಪ್ಪಗೆ ಬೈ ಬೈ ಹೇಳಿ ಬಿ.ವೈ.ರಾಘವೇಂದ್ರಗೆ ಜೈ ಜೈ ಹೇಳುವುದಾಗಿ ತಿಳಿಸಿದ್ದಾರೆ.
ಶನಿವಾರ ಬೈಂದೂರಿನ ಬಿಜೆಪಿ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಾ, ತಪ್ಪು ತಿಳುವಳಿಕೆಯಿಂದಾಗಿ ಕೆಎಸ್. ಈಶ್ವರಪ್ಪ ಜೊತೆ ಸೇರಿದ್ದೆವು. ಆದರೆ ವಾಸ್ತವದ ಅರಿವಾಗಿ ಮತ್ತೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಿಜೆಪಿ ಮತಗಳನ್ನು ಟಾರ್ಗೆಟ್ ಮಾಡಿ, ಕಾಂಗ್ರೆಸ್ ಗೆಲ್ಲಿಸುವ ಮಾನಸಿಕತೆಯಲ್ಲಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈಶ್ವರಪ್ಪ ಅವರಿಗೆ ನೀಡಿದ ಬೆಂಬಲವನ್ನು ವಾಪಾಸ್ ಪಡೆದಿದ್ದೇವೆ ಎಂದು ಹೇಳಿದ ಅವರು, ರಾಷ್ಟ್ರಭಕ್ತರಾದ ನಾವೆಲ್ಲರೂ ಪ್ರಧಾನಿ ಮೋದಿಯವರನ್ನು ಬೆಂಬಲಿಸುತ್ತೇವೆ ಜೊತೆಗೆ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರವಾಗಿ ಕೆಲಸ ಮಾಡಲಿದ್ದೇವೆ ಎಂದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 👇
https://youtu.be/SuPiipAllBg?si=kjXl7SgrZd0eAM5L
ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ಪಕ್ಷದಿಂದ ದೂರವಾಗಿದ್ದು ನಿಜ. ಅದೇ ಸಂದರ್ಭ ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಬಂದಿದ್ದರಿಂದ ಅವರೊಂದಿಗೆ ಸೇರಿಕೊಂಡಿದ್ದೆವು. ಈಗ ನಿಜಾಂಶ ಅರಿವಾಗಿದೆ. ಕಾಂಗ್ರೆಸ್ ಗೆಲ್ಲಿಸಲು ಅವರು ಶ್ರಮಿಸುತ್ತಿದ್ದಾರೆ ಮತ್ತು ಬಿಜೆಪಿ ಮತವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಮತಗಳನ್ನು ಟಾರ್ಗೆಟ್ ಮಾಡುವುದಿಲ್ಲ. ಬಿಜೆಪಿ ಪರವಾಗಿ ಕೆಲಸ ಮಾಡಿ ರಾಘವೇಂದ್ರರ ಕೈ ಬಲಪಡಿಸುವ ಕಾರ್ಯ ಮಾಡಲಿದ್ದೇವೆ ಎಂದರು.
