ಬೈಂದೂರಲ್ಲಿ ಲಕ್ಷ ಲೀಡ್ ಕೊಟ್ರೆ ಮುಂದಿನ 20 ವರ್ಷ ಕಾಂಗ್ರೆಸ್ ಇರಲ್ಲ : ರಾಜೇಶ್ ಜೀ

ಕಿರಿಮಂಜೇಶ್ವರ: ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ 1 ಲಕ್ಷ ಲೀಡ್ ನೀಡಿದ್ದೇ ಆದಲ್ಲಿ ಆ ರೆಕಾರ್ಡ್ ಬ್ರೇಕ್ ಮಾಡಲು ಯಾರಿಗೂ ಸಾಧ್ಯವಿಲ್ಲ. ಅಲ್ಲದೇ ಮುಂದಿನ ಇಪ್ಪತ್ತು ವರ್ಷ ಕಾಂಗ್ರೆಸ್ ತಲೆ ಎತ್ತಲ್ಲ. ಮುಂದಿನ ಚುನಾವಣೆಯಲ್ಲಿ ಎಮ್ಮೆಲ್ಲೆ ಕ್ಯಾಂಡಿಡೇಟೂ ಸಿಗಲ್ಲ ಜಿಲ್ಲಾ ಪಂಚಾಯತ್ ಗೂ ಜನ ಸಿಗಲ್ಲ ಎಂದು ರಾಜ್ಯ ಬಿಜೆಪಿ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್ ಹೇಳಿದರು. ಕಿರಿಮಂಜೇಶ್ವರದಲ್ಲಿ ಶನಿವಾರ ನಡೆದ ಯುವಶಕ್ತಿ ಸಮಾವೇಶದಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಬಿ.ವೈ ರಾಘವೇಂದ್ರ ಇಬ್ಬರೂ ಕಳಂಕ ರಹಿತ, ಸಚ್ಚಾರಿತ್ರ್ಯ ಹೊಂದಿರುವುದರಿಂದ ಇಬ್ಬರ ಹೆಸರಿನಲ್ಲೂ ಮತ ಕೇಳಬಹುದು. ಶಾಸಕರಾದ ಗುರುರಾಜ ಗಂಟಿಹೊಳೆಯವರ ಬೂತ್ ಕಡೆಗೆ ಸಮೃದ್ಧ ನಡಿಗೆ ಎಲ್ಲರಿಗೂ ಮಾದರಿ ಎಂದರು.

ನಾವು ಪ್ರಧಾನಿ ಮೋದಿಯವರ ಹೆಸರಿನಲ್ಲಿ ಮತ ಕೇಳುತ್ತೇವೆ ಮತ್ತು ಮೋದಿಯವರೇ ನಮ್ಮ ಮುಂದಿನ ಪ್ರಧಾನಿ ಎನ್ನುತ್ತೇವೆ. ಕಾಂಗ್ರೆಸ್ಗೆ ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳುವ ತಾಕತ್ತು ಇದಯೇ? ಅವರನ್ನು ಪ್ರಧಾನಿ ಮಾಡುತ್ತೇವೆ ಎಂದು ಕಾರ್ಯಕರ್ತರು ಬಿಡಿ ಮುಖಂಡರು ಹೇಳಲು ಸಿದ್ದರಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕರ್ತರು ನಾಯಕತ್ವದ ವಿಶ್ವಾಸದ ಮೇಲೆ ಮತ ಕೇಳಬಹುದು ಎಂದರು.

ಪ್ರಧಾನಿ ಮೋದಿ ಕಳೆದ 10 ವರ್ಷದಲ್ಲಿ ಭಾರತೀಯರ ಆತ್ಮಗೌರವ ಹೆಚ್ಚಿಸಿದ್ದಾರೆ ಎಂದ ಅವರು, ಕಿಸಾನ್ ಸಮ್ಮಾನ್, ರೈತರ ಮಕ್ಕಳ ವಿದ್ಯಾನಿಧಿ ರದ್ದು ಮಾಡಿದ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭ ‘ಬೂತ್ ಕಡೆಗೆ ಸಮೃದ್ಧ ನಡಿಗೆ” ಪ್ರಚಾರ ಕಾರ್ಯಕ್ರಮದ ವಿಶೇಷ ಅನುಭವ ಮತ್ತು ಚಿತ್ರಗಳನ್ನು ಒಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಬೂತ್ ಕಡೆಗೆ ಸಮೃದ್ಧ ನಡಿಗೆ ಸಮಾರೋಪ ಗೊಂಡಿತು. ಶಾಸಕ ಗುರುರಾಜ ಗಂಟಿಹೊಳೆ ಅನುಭವ ಹಂಚಿಕೊಂಡರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ ಚುನಾವಣೆಯಲ್ಲಿ ಯುವ ಸಮೂಹ ಕಾರ್ಯ ಮತ್ತು ಮುಂದಿನ ಕೆಲವು ದಿನಗಳಲ್ಲಿ ಬೂತ್ ಮಟ್ಟದಲ್ಲಿ ಆಗಬೇಕಾದ ತುರ್ತು ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಭಾರಿ ರಘುಪತಿ ಭಟ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ವಿಜಯ್ ಕೊಡವೂರು, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗಜೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 👇
https://youtu.be/-IjMbt03m0M?si=wau56y-uRrTcONZs