ಕುಂದಾಪುರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ : ಬೈಕ್ ರ್ಯಾಲಿಗೆ ಸಾಥ್ ನೀಡಿದ ಅಣ್ಣಾಮಲೈ

ಕುಂದಾಪುರ: ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ನೀರಸವಾಗಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಗರಿಗೆದರಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ಘಟಾನುಘಟಿ ಅಭ್ಯರ್ಥಿಗಳ ಪೈಕಿ ಕರ್ನಾಟಕ ರಾಜ್ಯ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇದುವರೆಗೆ ನೀರಸ ವಾಗಿದ್ದ ಚುನಾವಣಾ ಮತಪ್ರಚಾರ ಕಾರ್ಯಕ್ರಮಕ್ಕೆ ಇದ್ದಕ್ಕಿದ್ದಂತೆ ಚಾಲನೆ ದೊರಕಿದ್ದು ಚುನಾವಣೆಗೆ ಎರಡು ದಿನ ಇರುವಂತೆಯೇ ಕುಂದಾಪುರದ ಬಿಜೆಪಿ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರವಾಗಿದೆ.

ಬೃಹತ್ ಬೈಕ್ ರ್ಯಾಲಿ ಮೂಲಕ ಮಂಗಳವಾರ ಸಂಜೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಚಾರ ನಡೆಸಿತು. ಮಾಬುಕಳ ವೃತ್ತದಿಂದ ಮೊದಲ್ಗೊಂಡ ಬಿಜೆಪಿಯ ಬೈಕ್ ರ್ಯಾಲಿ ಕುಂದಾಪುರವನ್ನು ಪ್ರವೇಶಿಸುವುದರ ಮೂಲಕ ಬಿಜೆಪಿಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ಮತಯಾಚನೆ ಮಾಡಲಾಯಿತು.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಯಾರು ಇರಲಿ, ದೇಶದ ಪ್ರಧಾನಿಯಾಗಿ ನಮ್ಮ ಆಯ್ಕೆ ನರೇಂದ್ರ ಮೋದಿ ಎನ್ನುವ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಮಾತನಾಡುತ್ತಿರುವ ಬಿಜೆಪಿ ನಾಯಕರು ಇದ್ದಕ್ಕಿದ್ದಂತೆ ಇಂದು ಬ್ರಹ್ಮಾವರದ ಮಾಬುಕಳದಿಂದ ಕುಂದಾಪುರದವರೆಗೆ ಬೃಹತ್ ಬೈಕ್ ರ್ಯಾಲಿ ಶೋ ನಡೆಸಿದರು. ಸುಮಾರು ಒಂದುವರೆ ಸಾವಿರ ಬೈಕುಗಳ ಜೊತೆಗೆ ರ್ಯಾಲಿ ನಡೆಸಿದ ಬಿಜೆಪಿಯ ಕಾರ್ಯಕರ್ತರಿಗೆ ಉಡುಪಿಯ ಮಾಜಿ ಎಸ್ ಪಿ ಯಾಗಿದ್ದ ಪ್ರಸ್ತುತ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಕೆ ಅಣ್ಣಮಲೈ ಅವರು ಕುಂದಾಪುರದಲ್ಲಿ ಸಾಥ್ ನೀಡಿದರು.

ಬೃಹತ್ ರೋಡ್ ಶೋ ನಡೆಸಿದ ಅಣ್ಣಮಲೈ, ಬೈಕ್ ರ್ಯಾಲಿಯ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಗೆಲ್ಲಬೇಕು ಎಂಬ ದೃಷ್ಟಿಯಲ್ಲಿ 2014ರಿಂದ ನಾವು ಎಲ್ಲಾ ಕಾರ್ಯಕರ್ತರು ಬೀದಿಗಿಳಿದು ಕೆಲಸ ಮಾಡಿದ್ದೇವೆ. ಈಗ ಮತ್ತೆ 2024ರ ಲೋಕಸಭಾ ಚುನಮಾವಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ಕಾರಣಕ್ಕಾಗಿ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಬಾರಿಯೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ. ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಂಪಿ ಆಗುವುದು ಖಚಿತ ಎಂದು ಹೇಳಿದರು.

ಕೋಟ ಶ್ರೀನಿವಾಸ ಪೂಜಾರಿಯವರಂತಹ ಸರಳ ಅಭ್ಯರ್ಥಿ ಇಡೀ ದೇಶದಲ್ಲೇ ಇಲ್ಲ. ಬಿಜೆಪಿಯ ಶ್ರಮ ಮತಗಳಾಗಿ ಪರಿವರ್ತನೆಯಾಗಬೇಕು. ಎರಡು ಬಾರಿ ಮೋದಿ ಪ್ರಧಾನಿಯಾಗಿದ್ದಾರೆ, ಈ ಬಾರಿ ನಾನೊಬ್ಬ ಮತ ಹಾಕದೇ ಇದ್ದರೇ, ಏನೂ ಸಮಸ್ಯೆ ಇಲ್ಲ ಎಂದು ಕೂರದೇ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರಂತಹ ಸಂಸದರನ್ನು ಪಡೆದುಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿಕೊಂಡರು.

ನಮ್ಮ ಸರ್ಕಾರ ಸ್ವಚ್ಛ ಭಾರತ ಯೋಜನೆಯ ಭಾಗವಾಗಿ ಮನೆಮನೆಗೆ ಶೌಚಾಲಯವನ್ನು ನಿರ್ಮಾಣ ಮಾಡಿಕೊಟ್ಟಿದೆ. ಆದರೂ ಕಾಂಗ್ರೆಸಿಗರು ‘ಚೊಂಬು’ ಹಿಡಿದುಕೊಂಡಿರುವುದು ಯಾಕೆ ಎನ್ನುವುದು ಗೊತ್ತಿಲ್ಲ ಎನ್ನುವುದರ ಮೂಲಕ ರಾಜ್ಯ ಸರ್ಕಾರದ ‘ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ‘ಚೊಂಬು” ಎಂಬ ಜಾಹೀರಾತಿನ ಬಗ್ಗೆ ವ್ಯಂಗ್ಯವಾಡಿದರು.

ಈ ಬಳಿಕ ಮಾಧ್ಯಮ ವರದಿಗಾರರಿಗೆ ಸ್ಪಂದಿಸಿದ ಅಣ್ಣಾಮಲೈ, ತಮಿಳುನಾಡಿನಲ್ಲಿ ಬಿಜೆಪಿಯ ಹೊಸ ಅಲೆ ಎದ್ದಿದೆ. ಈ ಬಾರಿ ತಮಿಳುನಾಡಿನಲ್ಲಿ ‘ಡಬ್ಬಲ್ ಡಿಜಿಟ್’ನಲ್ಲಿ ಕ್ಷೇತ್ರಗಳು ಬಿಜೆಪಿ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೈಕ್ ರ್ಯಾಲಿಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಲಿ, ಉಡುಪಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್ ಮಧ್ವರಾಜ್, ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ ಉಪ ಪ್ರಭಾರಿ ರಾಜೇಶ್ ಕಾವೇರಿ, ಕುಂದಾಪುರ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.