ಬಿಜೆಪಿ ತೀರಾ ಕೀಳುಮಟ್ಟದ ಅಪಪ್ರಚಾರ ನಡೆಸುತ್ತಿದೆ – ಗೀತಾ ಶಿವರಾಜ್ ಕುಮಾರ್ ಬೇಸರ

ಒಂದು ರಾಷ್ಟ್ರೀಯ ಪಕ್ಷ ನಾಯಕರು, ಅದರಲ್ಲೂ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವವರು ಅಧಿಕಾರದಾಸೆಗೆ ಇಷ್ಟೊಂದು ಕೀಳುಮಟ್ಟದ ಅಪಪ್ರಚಾರ ಮಾಡ್ತಿದಾರೆ ಎನ್ನುವುದು ಬೇಸರ ತರಿಸಿದೆ. ತೀರಾ ವೈಯುಕ್ತಿಕ ವಿಚಾರಗಳ ಬಗ್ಗೆಯೂ ಅಪಪ್ರಚಾರ ನಡೆಸುತ್ತಿದ್ದಾರೆ. ನಾನು ಒಂದು ಹೆಣ್ಮಗಳು ಎನ್ನುವುದನ್ನೂ ಮರೆತು ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ಧಿ ಹರಡಿಸಲಾಗುತ್ತಿದೆ. ಆದರೆ ನಾನು ಅವರ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡುವುದಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೀತಾ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಅವರು ಶನಿವಾರ ಸಂಜೆ ಬೈಂದೂರು ವಿಧಾನಸಭಾ ಕ್ಷೇತ್ರದ ಕಟ್ ಬೇಲ್ತೂರು ಗ್ರಾಮದಲ್ಲಿ ಗ್ರಾಮೀಣ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಹೆಮ್ಮಾಡಿ ಮತ್ತು ಕಟ್ ಬೇಲ್ತೂರು ಗ್ರಾಮ ಪಂಚಾಯತಿ ಮಟ್ಟದ ಪ್ರಚಾರ ಸಭೆಯಲ್ಲಿ ರಾಷ್ಟ್ರೀಯ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ನನ್ನ ಮನೆಯಲ್ಲಿ ನಾಯಿ ಇದೆ. ಯಾರನ್ನೂ ಒಳಕ್ಕೆ ಬಿಡಲ್ಲ, ನನ್ನ ಮನೆ ಬೆಂಗಳೂರಲ್ಲಿದೆ ಶಿವಮೊಗ್ಗ ಜನ ಬೆಂಗಳೂರಿಗೆ ಹೋಗ್ಬೇಕಾಗುತ್ತೆ, ಹೀಗೇ ವಿರೋಧ ಪಕ್ಷದವರು ತೀರಾ ಖಾಸಗೀ ವಿಚಾರಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದೆಲ್ಲವೂ ಸುಳ್ಳು. ನನಗೆ ಶಿವಮೊಗ್ಗದಲ್ಲಿಯೂ ಮನೆ ಇದೆ. ಮುಂದೆ ಬೈಂದೂರಿನಲ್ಲಿಯೂ ಮನೆ ಮಾಡ್ತೇನೆ ಎಂದು ಭರವಸೆ ನೀಡಿದ ಅವರು, ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೇ ಈ ಬಾರಿ ನನಗೆ ಜನ ಮತ ನೀಡುತ್ತಾರೆ. ಆ ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಕೊಡಿ ಎಂದು ಹೇಳಿದರು.

ಬಂಗಾರಪ್ಪನವರ ಮಗಳಾಗಿ ನಾನು ಕೂಡಾ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಬೈಂದೂರು ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಜೆಜೆಎಂ, ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಿ ಹೆಚ್ಚಿನ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಮಾಜೀ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬಿಜೆಪಿಗೆ ಬೆಳೆಯುವ ನಾಯಕರು ಬೇಡ. ನೆಲದಮೇಲೆ ಕುಳಿತು ಹೇಳಿದ್ದನ್ನು ಮಾಡುವವರು ಬೇಕು. ನನಗೆ, ಹಾಲಾಡಿಯವರಿಗೆ, ರಘುಪತಿ ಭಟ್ರಿಗೆ ಹೀಗೇ ಎಲ್ಲರನ್ನೂ ಹತ್ತಿಕ್ಕಿದ ಬಿಜೆಪಿಗೆ ನಮ್ಮ ಬೆವರು ಹರಿಸಿದ್ದೇ ವ್ಯರ್ಥವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ವೋಟ್ ಹಾಕಿದ್ರೆ ನಿಮಗೆ ಚೊಂಬೇ ಗತಿ ಎನ್ನುವುದು ನೆನಪಿರಲಿ ಎಂದರು.
ಈ ಸಂದರ್ಭ ಮಾತನಾಡಿದ ನಟ ಶಿವರಾಜ್ ಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನು ಮಾಡ್ತಾರೆ ಅಂತ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ನಾನು ನಿಮಗೆ ಭರವಸೆ ಕೊಡುತ್ತೇನೆ. ಗೀತಾ ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತಾಳೆ. ಅದಕ್ಕೆ ನಾನು ಗ್ಯಾರೆಂಟಿ ಎಂದ ಶಿವರಾಜ್ ಕುಮಾರ್, ಒಂದೇ ಒಂದು ಬಾರಿ ಅವಕಾಶ ಕೊಟ್ಟು ನೋಡಿ ಎಂದರು.

ಈ ವೇಳೆ ಮಾತನಾಡಿದ ಗೋಪಾಲ ಪೂಜಾರಿ,, ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳು ಸಾಮನ್ಯ ಜನರ ಮನ-ಮನೆ ತುಂಬಿದೆ. ಅದೇ ರೀತಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ನಮ್ಮ ಪಕ್ಷದಿಂದ ಘೋಷಿಸ್ಪಲ್ಟಿರುವ 5 ನ್ಯಾಯ ಯೋಜನೆಗಳು ಜನರ ಹಸಿವು ನೀಗಿಸುವಲ್ಲಿ ಯಶಸ್ವಿಯಾಗಲಿದೆ ಎಂದರು..
ಇದೇ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ಚುನಾವಣಾ ಉಸ್ತುವಾರಿ ಜಿ.ಎ.ಬಾವ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ನೇತ್ರಾವತಿ, ಮಾಜೀ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ್ ಪೂಜಾರಿ, ಬಾಳಿಕೆರಿ ಶರತ್ ಕುಮಾರ್ ಶೆಟ್ಟಿ, ಸೈಯದ್ ಮೊದಲಾದವರು ಉಪಸ್ಥಿತರಿದ್ದರು.