ಅಂತರ್ ರಾಜ್ಯ ಕಳ್ಳ ರಾಬಿನ್ ಹುಡ್ ನ ಬಂಧನ: ಕೆಜಿಗಟ್ಟಲೆ ಬಂಗಾರ ವಜ್ರ ವಶಕ್ಕೆ
ಚಿನ್ನ ಕದ್ದು ಸಮಾಜ ಸೇವೆ ಮಾಡ್ತೇನೆ ಎಂದ ಖದೀಮ!
ಈತನ ಪತ್ನಿ ಜಿಲ್ಲಾ ಪಂಚಾಯತೊಂದರ ಅಧ್ಯಕ್ಷೆ!?
ಕಾರಿಗೂ ಅಧ್ಯಕ್ಷ ಬೋರ್ಡ್ ಹಾಕ್ಕೊಂಡು ತಿರುಗಾಡ್ತಾನೆ ಈ ಭೂಪ!

ಕೋಟ: ಕೇರಳ ರಾಜ್ಯದಿಂದ ಕೆಜಿಗಟ್ಟಲೆ ಚಿನ್ನಾಭರಣ ಕಾರಿನಲ್ಲಿ ಸಾಗಿಸುತ್ತಿದ್ದ ಕುಖ್ಯಾತ ಅಂತರಾಜ್ಯ ಕಳ್ಳನನ್ನು ಕೋಟ ಪೊಲೀಸರು ಬಂಧಿಸಿ ಸ್ವತ್ತುಗಳನ್ನು ವಶಪಡಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ಕುಖ್ಯಾತ ಕಳ್ಳ, ಕದ್ದ ಚಿನ್ನವನ್ನು ಬಡವರಿಗೆ ಹಂಚುತ್ತಿದ್ದ ಎನ್ನಲಾದ ಮೊಹಮ್ಮದ್ ಇರ್ಫಾನ್ ಯಾನೆ ರಾಬಿನ್ ಹುಡ್(35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ ಸುಮಾರು ಒಂದು ಕೇಜಿಗಿಂತಲೂ ಹೆಚ್ಚಿನ ಚಿನ್ನ, ವಜ್ರಗಳ ನೆಕ್ಲೆಸ್ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶನಿವಾರ ಸಂಜೆ ಆರೋಪಿ ಮೊಹಮ್ಮದ್ ಇರ್ಫಾನ್ ಕಾರಿನಲ್ಲಿ ಕೇರಳದಿಂದ ಬಿಹಾರದ ಕಡೆಗೆ ಕೆಜಿಗಟ್ಟಲೆ ಚಿನ್ನಾಭರಣ ಸಾಗಿಸುತ್ತಿದ್ದ. ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸರು ಹೆದ್ದಾರಿ ತಪಾಸಣೆ ಸಂದರ್ಭ ಇರ್ಫಾನ್ ಕಾರನ್ನು ಅಡ್ಡಗಟ್ಟಿದ್ದರು. ಆದರೆ ಆರೋಪಿ ಇರ್ಫಾನ್ ಕಾರು ನಿಲ್ಲಿಸದೇ ಪರಾರಿಯಾಗಿದ್ದ. ಇದರಿಂದ ಪೊಲೀಸ್ ಉನ್ನತಾಧಿಕಾರಿಗಳು ಹೆದ್ದಾರಿ ಬದಿಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಟ್ಟೆಚ್ಚರದ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕೋಟ ಪೊಲೀಸರು ಕೋಟ ಅಮೃತೇಶ್ವರಿ ವೃತ್ತದಲ್ಲಿ ಬಂದೋಬಸ್ತ್ ನಡೆಸಿ ಕಾರನ್ನು ಅಡ್ಡಗಟ್ಟಿ ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿ ಇರ್ಫಾನ್ ಯಾನೆ ರಾಬಿನ್ ಹುಡ್ ಕೇರಳದಲ್ಲಿ ಚಿನ್ನಾಭರಣ ಕಳವು ಮಾಡಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.

ಆರೋಪಿ ಇರ್ಫಾನ್ ಶ್ರೀಮಂತರ ಚಿನ್ನಾಭರಣ ಕದ್ದು ತನ್ನೂರಿಗೆ ತೆರಳಿ ತನ್ನ ಗ್ರಾಮದ ಬಡವರ ಮನೆ ಮಕ್ಕಳಿಗೆ ಮದುವೆ, ಶಿಕ್ಷಣ, ಹೀಗೇ ಹಲವಾರು ಸಮಾಜ ಸೇವೆ ಮಾಡುತ್ತಿದ್ದಾನೆ ಎನ್ನಲಾಗಿದ್ದು ಈ ಬಗ್ಗೆ ಯೂಟ್ಯೂಬ್ ನಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ. ಅಲ್ಲದೇ ಈತನ ಮೇಲೆ ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಆರೋಪಿ ಇರ್ಫಾನ್ ರಾಬಿನ್ ಹುಡ್ ನ ಪತ್ನಿ ಬಿಹಾರದಲ್ಲಿ ರಾಜಕೀಯ ನಾಯಕಿಯೂ ಆಗಿದ್ದು, ಜಿಲ್ಲಾ ಪಂಚಾಯತ್ ಒಂದರ ಅಧ್ಯಕ್ಷೆ ಎನ್ನಲಾಗಿದೆ.
ಸಧ್ಯಕ್ಕೆ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ಸೊತ್ತು ಸಹಿತ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಎಸ್ಪಿ ಕೆ. ಅರುಣ್ ಕುಮಾರ್ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿಗಳಾದ ಕೆ.ಪಿ.ಹೆಗ್ಡೆ ಹಾಗೂ ಸಿದ್ಧಲಿಂಗಪ್ಪ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದಿವಾಕರ, ಎಸೈ ತೇಜಸ್ ಹಾಗೂ ಕ್ರೈಂ ಎಸೈ ಸುಧಾಪ್ರಭು, ಸಿಬ್ಬಂದಿಗಳಾದ ವಿಜಯೇಂದ್ರ, ಪ್ರಸನ್ನ ಮೊದಲಾದವರ ತಂಡ ಕಾರ್ಯಾಚರಣೆ ನಡೆಸಿತ್ತು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.