ಜೊತೆಗಾರರೊಂದಿಗೆ ಜಗಳವಾಡಿದ ನೆಲ್ಯಾಡಿ ಯುವಕ ಬ್ರಹ್ಮಾವರದಲ್ಲಿ ಸಾವು
ಬ್ರಹ್ಮಾವರ: ಉಜಿರೆ ಸಮೀಪದ ನೆಲ್ಯಾಡಿಯ ಯುವಕನೊಬ್ಬ ಬ್ರಹ್ಮಾವರದಲ್ಲಿ ಜೊತೆಗಾರರ ಜೊತೆ ಹೊಡೆದಾಡಿ ಸುಸ್ತಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿರುವ ಘಟನೆ ಏಪ್ರಿಲ್ 10ರಂದು ನಡೆದಿದೆ. ಕೌಕ್ರಾಡಿ ಗ್ರಾಮದ ಆಲಂಪಾಡಿ ನಿವಾಸಿ ಜಿ.ಎ. ಸಿದ್ದೀಕ್(40)ಮೃತಪಟ್ಟವರಾಗಿದ್ದಾರೆ.

ಸಿದ್ದೀಕ್ ಮೂಲತ: ಸಕಲೇಶಪುರ ಆನೆಮಹಲ್ ನಿವಾಸಿಯಾಗಿದ್ದು ಹಲವು ವರ್ಷಗಳಿಂದ ನೆಲ್ಯಾಡಿಯಲ್ಲಿ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು ಪತ್ನಿ, ಮಕ್ಕಳೊಂದಿಗೆ ಆಲಂಪಾಡಿಯಲ್ಲಿ ವಾಸ್ತವ್ಯವಿದ್ದರು. ಇತ್ತೀಚಿನ ಕೆಲ ಸಮಯದಿಂದ ಮೆಕ್ಯಾನಿಕ್ ವೃತ್ತಿ ಬಿಟ್ಟು ಬೇರೆ ಕೆಲಸ ನಿರ್ವಹಿಸುತ್ತಿದ್ದರು. ಜಿ.ಎ.ಸಿದ್ದೀಕ್ ಹಾಗೂ ನೆಲ್ಯಾಡಿಯ ಪ್ರಶಾಂತ ಎಂಬವರನ್ನು ಬೋಪಣ್ಣ ಎಂಬವರು ಇಂಟರ್ಲಾಕ್ ಅಳವಡಿಕೆ ಕೆಲಸಕ್ಕೆಂದು ಬ್ರಹ್ಮಾವರಕ್ಕೆ ಕರೆದೊಯ್ದಿದ್ದರು.
ಬ್ರಹ್ಮಾವರದ ಹಾರಾಡಿ ಗ್ರಾಮದ ಹಾರಾಡಿ ನಿವಾಸಿ ಅರುಣ್ ಆಲ್ಬಡ್ ಎಂಬವರ ಅಂಗಳದಲ್ಲಿ ಎ. ೧೦ರಂದು ಬೆಳಿಗ್ಗೆ ಕೆಲಸ ಮಾಡುತ್ತಿದ್ದಾಗ ಸಹ ಕಾರ್ಮಿಕರೊಂದಿಗೆ ಪರಸ್ಪರ ಜಗಳ ಮಾಡಿ, ಹೊಡೆದಾಡಿಕೊಂಡು ಸುಸ್ತಾಗಿದ್ದರು. ಇದನ್ನು ನೋಡಿದ ಸಹ ಕಾರ್ಮಿಕರು ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಮಧ್ಯಾಹ್ನ 12.55ಕ್ಕೆ ಕರೆದೊಯ್ದಿದ್ದರು. ಆದರೆ ಸಿದ್ದೀಕ್ ಅವರು ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಹೊಡೆದಾಟಕ್ಕೂ ಮೊದಲು ಸಿದ್ದೀಕ್ ಅವರ ಮೊಬೈಲ್ಗೆ ಯಾರದ್ದೋ ಫೋನ್ ಕರೆ ಬಂದಿದ್ದು ಆ ಬಳಿಕ ಅವರು ಮಾನಸಿಕವಾಗಿ ಕುಗ್ಗಿದಂತೆ ಭಾಸವಾಗಿದ್ದರು ಎಂದು ಸಹ ಕಾರ್ಮಿಕರು ತಿಳಿಸಿರುವುದಾಗಿ ಸಿದ್ದೀಕ್ ಅವರ ಪತ್ನಿ ಮೈಮುನ ಅವರು ಪೊಲೀಸರಿಗೆ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
