ಮಾನಹಾನಿಕರ ಭಾಷಣ – ಶಾಸಕ ಯಶ್ಪಾಲ್ ವಿರುದ್ಧ ನಾಗೇಂದ್ರ ಪುತ್ರನ್ ಕೋಟ ದೂರು ದಾಖಲು
ಕುಂದಾಪುರ: ಸಿಜೆಪಿ ಮತ್ತು ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿ ಉಡುಪಿಯಲ್ಲಿ ಆಯೋಜಿಸಲಾದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಉಡುಪಿಯ ಶಾಸಕ ಮಾನಿಹಾನಕರ ಮತ್ತು ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಅವರು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಪ್ರಕಾಶ್ರಾಜ್ ಅವರೇ ಅಧಿಕಪ್ರಸಂಗ ನಿಲ್ಲಿಸಿ, ಇಲ್ಲದಿದ್ದರೆ ಮೀನುಗಳಿಗೆ ಆಹಾರವಾಗಬಹುದು” ಎಂಬ ಶೀರ್ಷಿಕೆಯಡಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಬಹಿರಂಗ ಸಭೆಯಲ್ಲಿ ನಟ ಪ್ರಕಾಶ್ರಾಜ್ ಅವರ ಜೀವಕ್ಕೆ ಹಾನಿಯಾಗಬಹುದೆಂಬ ಸೂಚ್ಯ ಬೆದರಿಕೆ ಸ್ವರೂಪದ ಹೇಳಿಕೆಯನ್ನುನೀಡಿರುವುದು ಪ್ರಕಟವಾಗಿದೆ. ಒಬ್ಬ ಚುನಾಯಿತ ಜನಪ್ರತಿನಿಧಿಯಿಂದ ಸಾರ್ವಜನಿಕವಾಗಿ ಇಂತಹ ಹೇಳಿಕೆ ಬರುವುದು ಅತ್ಯಂತ ಗಂಭೀರ ಹಾಗೂ ಖಂಡನೀಯ ಸಂಗತಿಯಾಗಿದೆ ಎಂದಿದ್ದಾರೆ. ಅದೇ ಕಾರ್ಯಕ್ರಮದ ವಿಡಿಯೋ ದಾಖಲೆಯಲ್ಲಿ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಶಾಸಕರು ಆಕ್ಷೇಪಾರ್ಹ, ಮಾನಹಾನಿಕರ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಹೇಳಿಕೆಗಳು ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ನೇರ ಧಕ್ಕೆಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.
ಉಡುಪಿ ಸಂಸ್ಕೃತಿ, ಸಂಸ್ಕಾರ ಮತ್ತು ವಿವಿಧತೆಯಲ್ಲಿ ಏಕತೆಗೆ ಶ್ರೇಷ್ಠ ವೆನಿಸಿತ್ತು, ಆದರೆ ಈಗ ಅವೆಲ್ಲವೂ ಮರೆ ಮಾಚುತ್ತಿದೆ, ಕಪಿ ಚೇಷ್ಟೆ ಮಾತನಾಡುವ ಉಡುಪಿ ಶಾಸಕ ದೇಶವೇ ತಲೆ ತಗ್ಗಿಸುವಂತೆ ಹೇಳಿಕೆಗಳನ್ನು ನೀಡುತ್ತಾ, ಜಾತಿ ಜಾತಿಗಳ ಮಧ್ಯ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ, ಬಾಬರಿ ಮಸೀದಿ ಧ್ವಂಸ ಮಾಡಿದ ಹಾಗೆ ರಾಹುಲ್ ಗಾಂಧಿ ಅವರ ಕುಟುಂಬವನ್ನು ಕೂಡ ಧ್ವಂಸ ಮಾಡುತ್ತೇವೆ ಎಂದು ಸಾರ್ವಜನಿಕರ ಮಧ್ಯದಲ್ಲಿ ಅತ್ಯಂತ ಕ್ರೂರ ಮನಸ್ಸಿನ ಹೇಳಿಕೆಯನ್ನ ನೀಡಿದ್ದು, ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
