ಕೋಟ: ಸವಿತಾ ಸಮಾಜದಿಂದ ನಿರಾಶ್ರಿತರಿಗೆ ಉಚಿತ ಕ್ಷೌರ ಸೇವೆ – ಹೊಸ ಬದುಕು ಆಶ್ರಮದಲ್ಲಿ ವರ್ಷದ ಸಂಭ್ರಮ
ಕೋಟ: ಕೋಟ ವಲಯದ ಸವಿತಾ ಸಮಾಜದ ಸದಸ್ಯರು ತಮ್ಮ ವಾರದ ರಜಾದಿನವನ್ನು ಸಮಾಜಸೇವೆಗೆ ಮೀಸಲಿಟ್ಟು ಕಳೆದ ಒಂದು ವರ್ಷದಿಂದ ತಿಂಗಳಿಗೆ ಎರಡು ಬಾರಿ ಹೊಸಬದುಕು ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ 40ಕ್ಕೂ ಅಧಿಕ ಆಶ್ರಿತರಿಗೆ ಉಚಿತವಾಗಿ ಹೇರ್ ಕಟಿಂಗ್ ಹಾಗೂ ಶೇವಿಂಗ್ ಸೇವೆ ಒದಗಿಸುತ್ತಿದ್ದೇವೆ ಎಂದು ಕೋಟ ವಲಯ ಸವಿತಾ ಸಮಾಜದ ಅಧ್ಯಕ್ಷ ಹರೀಶ ಭಂಡಾರಿ ಗಿಳಿಯಾರು ಹೇಳಿದರು.

ಅವರು ಕೋಟ ವಲಯ ಸವಿತಾ ಸಮಾಜ ವತಿಯಿಂದ ಸಾಲಿಗ್ರಾಮ ಸಮೀಪದ ತೋಡ್ಕಟ್ಟಿನ ಹೊಸಬದುಕು ಆಶ್ರಮದ ಆಶ್ರಿತರಿಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ನೀಡಲಾಗುತ್ತಿರುವ ಉಚಿತ ಕ್ಷೌರ ಸೇವೆಯ ಮೊದಲ ವರ್ಷದ ಸಂಭ್ರಮದ ಧ್ಯಕ್ಷತೆ ವಹಿಸಿ ಮಾತನಾಡಿದರು.
ಗೀತಾನಂದ ಫೌಂಡೇಶನ್ ಕೋಟ ಪಡುಕರೆ ಪ್ರವರ್ತಕ ಆನಂದ ಸಿ. ಕುಂದರ್ ಕಾರ್ಯಕ್ರಮ ಉದ್ಘಾಟಿಸಿ, ಸವಿತಾ ಸಮಾಜದ ಕಾರ್ಯ ಎಲ್ಲರಿಗೂ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಕ್ಷೌರಿಕರಾದ ಶೀನ ಭಂಡಾರಿ ಗಿಳಿಯಾರು, ಮೋಹನ್ ಭಂಡಾರಿ ಕೋಟ, ಕೆ. ಸಂಜೀವ ಭಂಡಾರಿ ಪಡುಕರೆ ಹಾಗೂ ಗೋಪಾಲ ಭಂಡಾರಿ ಗುಂಡ್ಮಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಾಷ್ಟೋತ್ಥಾನ ವಿದ್ಯಾಕೇಂದ್ರ ಉಡುಪಿ ಕಾರ್ಯದರ್ಶಿ ರಿಷಿರಾಜ್ , ಉಡುಪಿ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಪಡುಕರೆ ಮಂಜುನಾಥ ಭಂಡಾರಿ, ಕೋಟ ವಲಯ ಸವಿತಾ ಸಮಾಜದ ಗೌರವಾಧ್ಯಕ್ಷ ರಮೇಶ್ ಭಂಡಾರಿ ಕಾರ್ಕಡ, ಕಾರ್ಯದರ್ಶಿ ಪ್ರಶಾಂತ ಭಂಡಾರಿ ಶೇಡಿಮನೆ ಹಾಗೂ ಹೊಸಬದುಕು ಆಶ್ರಮದ ಸಂಸ್ಥಾಪಕ ವಿನಯಚಂದ್ರ ಸಾಸ್ತಾನ, ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಅಚ್ಲಾಡಿ ಉಪಸ್ಥಿತರಿದ್ದರು. ಮಂಜುನಾಥ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಪ್ರಶಾಂತ್ ಭಂಡಾರಿ ವಂದಿಸಿದರು.
