ವಿದ್ಯಾನಗರ: ಸರಸ್ವತಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಪದಗ್ರಹಣ, ವಿವಿಧ ಕ್ಲಬ್ ಗಳ ಉದ್ಘಾಟನೆ
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹೆಚ್ಚಬೇಕು: ನಿವೃತ್ತ ಬಿಇಒ ಗೋಪಾಲ ಶೆಟ್ಟಿ ಅಭಿಮತ
ಕುಂದಾಪುರ|ಸಿದ್ಧಾಪುರ: ಶಾಲೆಯಲ್ಲಿ ಕೇವಲ ಶಿಕ್ಷಣದಿಂದ ಮಾತ್ರ ಮಕ್ಕಳ ಪ್ರಗತಿ ಸಾಧ್ಯವಿಲ್ಲ, ವಿದ್ಯಾರ್ಥಿಗಳು ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಬೇಕು, ಅಲ್ಲದೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯಲು ಶಿಕ್ಷಕರು ಸಹಕರಿಸಬೇಕು. ತಾನೂ ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವ ಮನೋಭಾವ ವಿದ್ಯಾರ್ಥಿ ದಿಸೆಯಲ್ಲಿಯೇ ಆರಂಭಗೊಂಡರೆ ಉತ್ತಮ ಸಮಾಜದ ಸೃಷ್ಟಿ ಸಾಧ್ಯ ಎಂದು ಕುಂದಾಪುರ ಕ್ಷೇತ್ರದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು.

ಅವರು ಬುಧವಾರ ಸಿದ್ಧಾಪುರದ ವಿದ್ಯಾನಗರದಲ್ಲಿರುವ ಸರಸ್ವತಿ ವಿದ್ಯಾಲಯದ 2026-27ನೇ ಸಾಲಿನ ಶೈಕ್ಷಣಿಕ ವರ್ಷ ಪದಗ್ರಹಣ ಕಾರ್ಯಕ್ರಮ ಮತ್ತು ವಿವಿಧ ಕ್ಲಬ್ ಗಳನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ಗೋಪಾಲ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುಮುಖ ಎಜ್ಯುಕೇಶನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟೀ ಹಾಗೂ ಜ್ಞಾನ ಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಬಿ ಎಸ್ ಸುರೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳಲ್ಲಿ ಶಾಲಾ ಶಿಸ್ತು ಮತ್ತು ಕರ್ತವ್ಯದ ಕುರಿತು ಮಾತನಾಡಿದರು. ಇದೇ ಸಂದರ್ಭ ವಿದ್ಯಾರ್ಥಿ ನಾಯಕ ಶಮಂತ್ ಶೆಟ್ಟಿ ಹಾಗೂ ಉಪನಾಯಕ ಆರ್ಯ ಶೆಟ್ಟಿ ಇವರೊಂದಿಗೆ ವಿವಿಧ ಮಂತ್ರಿ ಮಂಡಲದ ಸದಸ್ಯರ ಪ್ರಮಾಣವಚನ ಬೋಧಿಸಲಾಯಿತು. ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ಜ್ಞಾನ ಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಶ್ವೇತ ಗಣೇಶ್ ಪ್ರಮಾಣವಚನ ವಾಚಿಸಿದರು. ವಿಜ್ಞಾನ ಶಿಕ್ಷಕಿ ಶಿಲ್ಪಾ ನಿರೂಪಿಸಿದರು. ಹಿಂದಿ ಶಿಕ್ಷಕ ಪ್ರದೀಪ್ ಸ್ವಾಗತಿಸಿದರು. ಇಂಗ್ಲಿಷ್ ಶಿಕ್ಷಕಿ ಚೈತ್ರಾ ವಂದಿಸಿದರು.
