ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ: ನಕಲಿ ಇಮೇಲ್ ಬೆದರಿಕೆಗಳ ಕುರಿತು ಉಡುಪಿ ಎಸ್ಪಿ ಸ್ಪಷ್ಟನೆ
ಉಡುಪಿ: ಕಳೆದ ಕೆಲವು ದಿನಗಳಂದ ಉಡುಪಿ ಜಿಲ್ಲೆಯ ಕೆಲವು ನ್ಯಾಯಾಲಯಗಳ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂದು ಈ ಮೇಲ್ ಸಂದೇಶಗಳು ಬರುತ್ತಿರುವುದರ ಕುರಿತಾಗಿ ಉಡುಪಿ ಎಸ್ಪಿ ಹರಿರಾಂ ಶಂಕರ್ ಸ್ಪಷ್ಟನೆ ನೀಡಿದ್ದಾರೆ.

ನ್ಯಾಯಾಲಯ ತೆರೆಯುವ ಮೊದಲು ಪ್ರತಿದಿನ ಬೆಳಿಗ್ಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ನ್ಯಾಯಾಲಯಗಳ ಸುತ್ತಮುತ್ತಲೂ ಇವೆಯೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಇದರಿಂದಾಗಿ ಇಮೇಲ್ಗಳು ಬಂದರೂ ಸಹ, ನ್ಯಾಯಾಲಯಗಳು ಮತ್ತು ವಿಚಾರಣೆಗಳಿಗೆ ಅಡ್ಡಿಪಡಿಸುವ ಅಗತ್ಯವಿಲ್ಲ ಎಂದು ಹರಿರಾಮ್ ಶಂಕರ್ ಹೇಳಿದ್ದಾರೆ.
ಈ ಬಗ್ಗೆ ಪ್ರದಾನ ಜಿಲ್ಲಾ ನ್ಯಾಯಾಧೀಶರೊಂದಿಗೆ ಚರ್ಚಿಸಿದ್ದು, ನಮ್ಮಲ್ಲಿರುವ ಸೌಲಭ್ಯಗಳು ಮತ್ತು ಪೊಲೀಸರ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.
ಇದೆಲ್ಲದರ ಜೊತೆಗೆ ನಕಲಿ ಬೆದರಿಕೆಗಳ ಮೂಲದ ಬಗ್ಗೆ ಹೊರ ಜಿಲ್ಲೆಗಳು, ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಜೊತೆಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದೂ ಅವರು ಹೆಡಳಿದ್ದು, ಪ್ರದಾನ ಜಿಲ್ಲಾ ನ್ಯಾಯಾಧೀಶರ ಜೊತೆಗೆ ಇನ್ನೊಂದು ಸುತ್ತಿನ ಮಾತುಕತೆಯ ಬಳಿಕ ಸ್ಪಷ್ಟ ಚಿತ್ರಣದ ವಿಡಿಯೋ ಹೇಳಿಕೆ ನೀಡುವುದಾಗಿ ಅವರು ತಿಳಿಸಿದ್ದಾರೆ.
